ಪೊಳಲಿ: ಬ್ರಹ್ಮಕಲಶೋತ್ಸವದ ಅಂಗವಾಗಿ ವಿಜಯ ಕರ್ನಾಟಕ ದಿನಪತ್ರಿಕೆ ಹೊರತಂದ 100ಪುಟಗಳ ಶ್ರೀ ಪೊಳಲಿ ವಿಶೇಷ ಪುಸ್ತಕವನ್ನು ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಬಿಡುಗಡೆಗೊಳಿಸಿದರು.
ಪುಸ್ತಕದ ಬಗ್ಗೆ ಪ್ರಚಾರ ಸಮಿತಿ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಮಾತನಾಡಿ, ಬ್ರಹ್ಮಕಲಶೋತ್ಸವ ಸಂದರ್ಭ ದೇವಳದ ವತಿಯಿಂದ ವಿಶೇಷ ಪುಸ್ತಕವನ್ನು ಹೊರತರಬೇಕೆಂಬ ಇಂಗಿತ ಆಡಳಿತ ಮಂಡಳಿಯದ್ದಾಗಿತ್ತು. ಆದರೆ ದೇವಳ ಜೀರ್ಣೋದ್ಧಾರ ಕೆಲಸದ ಒತ್ತಡಗಳ ಮಧ್ಯೆ ಕಡಿಮೆ ಅವಧಿಯಲ್ಲಿ ಅದನ್ನು ಹೊರತರುವುದು ಕಷ್ಟಸಾಧ್ಯವಾಗಿತ್ತು. ಇದೇ ಸಮಯದಲ್ಲಿ ವಿಜಯ ಕರ್ನಾಟಕ ಬಳಗ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಪುಸ್ತಕ ಹೊರತರುವ ಬಗ್ಗೆ ಪ್ರಸ್ತಾಪವಿಟ್ಟಾಗ ಮುಕ್ತ ಮನಸ್ಸಿನಿಂದ ಅದಗೆ ಒಪ್ಪಿಗೆ ಸೂಚಿಸಲಾಯಿತು. ಆದರೆ ಆಮೇಲೆ ದೇವಿಯ ಕೃಪೆಯಿಂದ ಎಲ್ಲವೂ ಸುಸಾಂಗವಾಗಿ ನಡೆಯಿತು.
ಕೇವಲ 20 ದಿನಗಳ ಅವಧಿಂಯಲ್ಲಿ ಶ್ರೀ ಪೊಳಲಿ ಪುಸ್ತಕ ನಾವು ನಿರೀಕ್ಷೆ ಮಾಡಿದಕ್ಕಿಂತಲೂ ಅದ್ಭುತವಾಗಿ ಮೂಡಿ ಬಂದಿದೆ. ದೇವಾಲಯದ ಬಗ್ಗೆ ಖ್ಯಾತ ವಿದ್ವಾಂಸರು, ಲೇಖಕರು, ಇತಿಹಾಸ ತಜ್ಞರು, ಅಧ್ಯಯನಕಾರರಲ್ಲಿ ಬರೆಸಿ ದೇವಾಲಯ ಐತಿಹ್ಯ, ನವೀಕೃತ ದೇವಳದ ವೈಭವವನ್ನು ಸಚಿತ್ರವಾಗಿ ತೆರೆದಿಡಲಾಗಿದೆ. ನಿಜಕ್ಕೂ ಈ ವಿಷಯದಲ್ಲಿ ವಿಜಯ ಕರ್ನಾಟಕ ಬಳಗಕ್ಕೆ ಅಭಿನಂದನೆ ಸಲ್ಲಿಸಲೇಬೇಕಾಗಿದೆ ಎಂದರು.
ಶ್ರೀ ಪೊಳಲಿ ಪುಸ್ತಕ ಪ್ರಥಮ ಮುದ್ರಣ ಸೀಮಿತವಾಗಿ ಮಾಡಲಾಗಿದ್ದು, ಮುಂದೆ ಬ್ರಹ್ಮಕಲಶೋತ್ಸವದ ವೈಭವವನ್ನು ಹೇಳುವ ಸಮಗ್ರ ಚಿತ್ರಣ, ವರದಿಯೊಂದಿಗೆ 40ಪುಟಗಳನ್ನು ಸೇರ್ಪಡೆ ಮಾಡಿ ದೃಢಕಲಶ ಸಂದರ್ಭ ಹೊರತರಲಾಗುವುದು ಎಂದರು.
ಪುಸ್ತಕ ಬಿಡುಗಡೆ ಸಂದರ್ಭ ವಿಜಯ ಕರ್ನಾಟಕ ಮಂಗಳೂರು ಬ್ಯೂರೋದ ಸ್ಥಾನೀಯ ಸಂಪಾದಕ ಯು.ಕೆ. ಕುಮಾ ನಾಥ್, ರೆಸ್ಪಾನ್ಸ್ ವಿಭಾಗದ ಎಜಿಎಂ ರಾಮಕೃಷ್ಣ ಡಿ., ಟೈಮ್ಸ್ ಪ್ರಸರಣ ವಿಭಾಗದ ಎಜಿಎಂ ನವನೀತ್ ಶೆಟ್ಟಿ ಕದ್ರಿ, ರೆಸ್ಪಾನ್ಸ್ ವಿಭಾಗದ ಸಾಕೇತ್ ಭಂಡಾರಿ, ಅರವಿಂದ್, ಹರೀಶ್ ಗಟ್ಟಿ ಉಪಸ್ಥಿತರಿದ್ದರು.

