ಮೂಡುಬಿದಿರೆ: ಸ್ವಧರ್ಮವನ್ನು ಸರಿಯಾಗಿ ಅರಿತು ಪರಧರ್ಮದ ಬಗ್ಗೆಯೂ ಇನ್ನಷ್ಟು ಮನನ ಮಾಡಿಕೊಂಡು ಗೌರವ ನೀಡುವುದೇ ನಿಜವಾದ ಧರ್ಮ, ಪರಸ್ಪರ ಅರಿತು ಬಾಳುವುದರಿಂದಲೇ ಸಮಾಜದಲ್ಲಿ ಸಹೋದರತೆ, ಸೌಹಾರ್ದತೆ ಉಳಿಯಲು ಸಾಧ್ಯ ಎಂದು ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ ಮೌಲಾನ ಅಲ್ತಾಫ್ ಹುಸೈನ್ ದಾರಿಮಿ ಅವರು ಅಭಿಪ್ರಾಯಪಟ್ಟರು.

ಶಿರ್ತಾಡಿಯ ಕಾರ್ಮೆಲ್ ಮಾತೆಯ ದೇವಾಲಯದ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆದ `ಕ್ರಿಸ್ಮಸ್ ಬಂಧುತ್ವ’ ಕಾರ್ಯಕ್ರಮದಲ್ಲಿ ಅವರು ಸೌಹಾರ್ದ ಸಂದೇಶ ನೀಡಿದರು.
ಮುಂಡಾಜೆ ವಸತಿ ಶಾಲೆಯ ಶಿಕ್ಷಕ, ಲೇಖಕ ಅರವಿಂದ ಚೊಕ್ಕಾಡಿ, ಉಪನ್ಯಾಸಕ ನಿರಂಜನ್ ಅಳಿಯೂರು `ಸರ್ವಧರ್ಮ- ಸಮಾನತೆ, ಸಹೋದರತೆ- ಸಾಮರಸ್ಯ ಸಂಭ್ರಮ’ ಕುರಿತು ವಿವರಿಸಿದರು.
ಶಿರ್ತಾಡಿ ಧರ್ಮಕೇಂದ್ರದ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿ ಕ್ರಿಸ್ಮಸ್ ಹಬ್ಬದ ಮಹತ್ವ ಮತ್ತು ಸಮಾಜದಲ್ಲಿ ಸೌಹಾರ್ಧತೆಯ ಬಗ್ಗೆ ಮಾತನಾಡಿದರು.
ಶಿರ್ತಾಡಿಯ ಆಪತ್ಬಾಂಧವ ಸೂರಜ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ದೀಪಕ್ ನೊರೊನ್ಹ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ ವಂದಿಸಿದರು. ನ್ಯಾನ್ಸಿ ಮಾರ್ಟಿಸ್ ಸನ್ಮಾನಪತ್ರ ವಾಚಿಸಿದರು. ಜೈಸನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.
