ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸೆ.23 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಶಿಕ್ಷಕರ ಸಮ್ಮೇಳನ ಮತ್ತು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಾದ ನೀಲಾವರ ಸುರೇಂದ್ರ ಅಡಿಗ ಸಹಿತ ಕರಾವಳಿಯ ನಾಲ್ವರು ಶಿಕ್ಷಕರನ್ನು ರಾಜ್ಯಮಟ್ಟದ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಉಡುಪಿ ಜಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಒಂದೇ ವರ್ಷದಲ್ಲಿ ಎರಡನೇ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ಅತೀವ ಸಂತೋಷ ತಂದಿದೆ ಎಂದು ಅಜೆಕಾರು ಹೋಬಳಿ ಕ.ಸಾ.ಪ ಅಧ್ಯಕ್ಷ ಶೇಖರ ಅಜೆಕಾರು ನೀಲಾವರ ಅವರನ್ನು ಅಭಿನಂದಿಸಿದ್ದಾರೆ.
ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೀಲಾವರ ಸುರೇಂದ್ರ ಅಡಿಗ, ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢಶಾಲೆಯ ಸುಬ್ರಮಣ್ಯ ಉಪಾಧ್ಯ ಬಿ, ಹೆಬ್ರಿ ಎಸ್. ಆರ್. ಪದವಿಪೂರ್ವ ಕಾಲೇಜಿನ ದೀಪಕ್.ಎನ್ ಮತ್ತು ಬೆಳ್ತಂಗಡಿ ತಾಲೂಕಿನ ಕೆಮ್ಮಟೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಸಂತಿ.ಟಿ.ನಿಡ್ಲೆ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ದೀಪಕ್ ಎನ್ ಮತ್ತು ವಸಂತಿ ಟಿ. ನಿಡ್ಲೆ ಅವರು ಯುವ ಸಾಧಕ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗುತ್ತಿದ್ದು ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಪದನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ದೂರದರ್ಶನದ ಮಾಜಿ ನಿರ್ದೇಶಕ ಮಹೇಶ ಜೋಶಿ, ನಟ ನೇ.ಲ.ನರೇಂದ್ರ ಬಾಬು, ಪರಿಷತ್ತಿನ ರಾಜ್ಯಾಧ್ಯಕ್ಷ ಕೆ.ಎಸ್. ವಿಜಯ ಕುಮಾರ್, ವಿಧಾನ ಪರಿಷತ್ತಿನ ಸದಸ್ಯ. ಅ.ದೇವೆಗೌಡ ಮೊದಲಾದವರು ಅತಿಥಿಗಳಾಗಿರುವರು.
