ವಿಟ್ಲ: ಇಲ್ಲಿನ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೋಲಿಸ್ ಸಬ್ಇನ್ಸ್ ಪೆಕ್ಟರ್ ಸಿ.ಚಂದ್ರಶೇಖರ್, ವಿದ್ಯಾರ್ಥಿಗಳು ತಮ್ಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸುಸಂದರ್ಭ. ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಲಾ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಯುತ್ತಿದ್ದಂತೆ ಕಲಿಯುವುದು ನಮ್ಮ ಧರ್ಮ. ಇದೇ ರೀತಿ ವಿದ್ಯಾರ್ಥಿಗಳು ಬೆಳೆಯುತ್ತಾ ಕಲಿಯಬೇಕು ಎಂದರು.
ಶಾಲಾ ನಾಯಕ ವಿಜೇತ್.ಕೆ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿ, ನಾಯಕತ್ವವು ಸೇವೆ ಮಾಡಲು ಒದಗಿದ ಅಪೂರ್ವ ಅವಕಾಶ. ಈ ಅವಕಾಶವನ್ನು ಆದಷ್ಟು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಮಂತ್ರಿಮಂಡಲದ ಸದಸ್ಯರು ತಮ್ಮ ಖಾತೆಗಳ ವೈಶಿಷ್ಟ್ಯತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್, ಪೊಲೀಸ್ ಕಾನ್ಸ್ಟೇಬಲ್ ರಘುನಾಥ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಉಪಸ್ಥಿತರಿದ್ದರು. ಶಿಕ್ಷಕಿ ಮೋಹಿನಿ ಎ.ರೈ ಧೃಢೀಕರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಶಾಲಾ ನಾಯಕನಾಗಿ ವಿಜೇತ್ ಕೆ , ಉಪನಾಯಕಿಯಾಗಿ ದೀಪಾಲಿ ಎಂ.ಎಸ್., ಗೃಹಮಂತ್ರಿಯಾಗಿ ಸೃಜನಾ ಶೆಟ್ಟಿ, ಆರೋಗ್ಯ ಮಂತ್ರಿಯಾಗಿ ಚಿರಾಗ್ ಎ.ಶೆಟ್ಟಿ, ಕ್ರೀಡಾ ಮಂತ್ರಿಯಾಗಿ ಪ್ರಥಮ್, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀಯಾ ಆಳ್ವ ಪ್ರಮಾಣ ವಚನ ಸ್ವೀಕರಿಸಿದರು.
ಶಿಕ್ಷಕಿಯರಾದ ಮಮತಾ ಎನ್. ಸ್ವಾಗತಿಸಿ, ರೀಟಾ ಫೆರ್ನಾಂಡೀಸ್ ವಂದಿಸಿದರು. ರಶ್ಮಿ ಫೆರ್ನಾಂಡೀಸ್ ಹಾಗೂ ಲೀಲಾ ರವರು ಕಾರ್ಯಕ್ರಮ ನಿರೂಪಿಸಿದರು.


