ಸುರತ್ಕಲ್: ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಸುರತ್ಕಲ್ ಹೊಸ ಮಾರುಕಟ್ಟೆ ಕಾಮಗಾರಿ ನಡೆಯುವ ಸ್ಥಳ ಕೆರೆಯಂತಾದರೆ, ಸುರತ್ಕಲ್ ಬಂಟರ ಭವನದ ಹಿಂದಿನ ತೋಡು ತುಂಬಿ ಹರಿದು ಸುತ್ತಮುತ್ತಲಿನ ಮನೆಗಳು ಮುಳುಗಡೆಯಾಗಿದ್ದವು. ಅಗರಮೇಲು, ಚೊಕ್ಕಬೆಟ್ಟು, 7ನೇ ಬ್ಲಾಕ್ ಕೃಷ್ಣಾಪುರದಲ್ಲಿ ವರುಣಾಭರದಿಂದ ವಸತಿ ಬಡಾವಣೆಗಳು ಭಾಗಶಃ ಮುಳುಗಡೆಯಾಗಿ ಜನತೆ ತೀವ್ರ ಸಂಕಷ್ಟ ಅನುಭವಿಸಬೇಕಾಯಿತು.
ಸುದ್ದಿ ತಿಳಿದ ಡಾ. ವೈ. ಭರತ್ ಶೆಟ್ಟಿ ಅವರು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದ್ದರು. ನಾರಾಯಣ ಗುರು ಶಾಲೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಪಡೆದರು. ಶಾಲೆಯ ಪುನರ್ ನಿರ್ಮಾಣ, ಮನೆ ಕುಸಿತ ಸಹಿತ ವಿವಿಧ ಪ್ರಕೃತಿ ವಿಕೋಪದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಮರು ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ದೂರವಾಣಿ ಮೂಲಕ ಸಹಾಯ ಅರಸಿ ಬಂದ ಕಡೆಗೆ ಧಾವಿಸಿ ನೆರವು ನೀಡಿದರು.

