ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಡೆದ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಬೇಕು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಹಾಲು ಒಕ್ಕೂಟದ ಎದುರು ಧರಣಿ ನಡೆಸಲಾಯಿತು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇತ್ತೀಚೆಗೆ ಅಧಿಕಾರಿಗಳ ಹಣದ ದಾಹ ರಾಜಕೀಯ ಬಲದಿಂದ ಸಂಸ್ಥೆ ದಿನದಿಂದ ದಿನಕ್ಕೆ ನಷ್ಟದತ್ತ ಮುಖಮಾಡುತ್ತಿದೆ. ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಗರಣಗಳ ಸರಮಾಲೆಗೆ ಕಡಿವಾಣವಿಲ್ಲದಾಗಿದೆ. ಪ್ರಮುಖವಾಗಿ ಅವಶ್ಯಕತೆ ಇಲ್ಲದ ನೇಕಾತಿಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಹಣ ಲೂಟಿ, ಶಿಬಿರ ಕಚೇರಿಗಳ ಕಟ್ಟಡಗಳ ಹಗರಣ, ಗುಣಮಟ್ಟದ ಕೊರತೆ, ಹಾಲಿನ ರೂಟ್ಗಳ ಕಿಲೋಮೀಟರ್ ದಂಧೆ ನಡೆದಿದೆ ಎಂದು ಆರೋಪಿಸಿದರು.
ಒಕ್ಕೂಟದ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿ ನಷ್ಟಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ನಿವೃತ್ತಿ ಹೊಂದುವ ವ್ಯವಸ್ಥಾಪಕ ನಿರ್ದೇಶಕರಾದ ಹನುಮೇಶ್ ಯಾವುದೇ ಕಾರಣಕ್ಕೂ ಸಂಸ್ಥೆಯಲ್ಲಿ ಮುಂದುವರಿಸದೆ ಬೇರೆ ಕಡೆ ವರ್ಗಾವಣೆ ಮಾಡಬೇಕು. ಅಧಿಕಾರಿಗಳು ನಮಗೆ ಉತ್ತರ ಕೊಡಬೇಕಾಗಿದೆ. ಇಲ್ಲವಾದರೆ ಈ ಹಗರಣಗಳನ್ನು ಸಿಬಿಐಗೆ ಒಪ್ಪಿಸುವಂತೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ ಮತ್ತು ನಿರ್ಧೇಶಕರಾದ ಹನುಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜೀವನಾಡಿಯಾಗಿರುವ ಸಂಸ್ಥೆಯನ್ನು ಉಳಿಸಬೇಕಾದ ನಮ್ಮ ನಿಮ್ಮೆಲ್ಲರ ಹೊಣೆ. ಈ ಕೂಡಲೇ ಸಭೆ ಕರೆದು ನಿಮ್ಮ ಆರೋಪದ ಅಂಶಗಳನ್ನು ಅಕಾರಿಗಳ ಗಮನಕ್ಕೆ ತಂದು ಹಾಲು ಓಕ್ಕೂಟದ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಯಲ್ಪಾಡ್ ಹರೀಶ್, ಭರತ್, ರಂಜಿತ್, ಸಾಗರ್, ಸುಪ್ರಿಂಚಲ, ಕೆಂಬೋಡಿ ಕೃಷ್ಣೇಗೌಡ, ನರಸಾಪುರ ಪುರುಶೋತ್ತಮ್, ಶಿವ, ಕ್ಯಾಸಂಬಳ್ಳಿ ಪ್ರತಾಪ್, ಬೇತಮಂಗಲ ಮಂಜು, ಕಣ್ಣೂರು ಗಣೇಶ್, ವಡ್ಡಹಳ್ಳಿ ಮಂಜುನಾಥ್, ವೇಮಗಲ್ ಅಮರನಾರಾಯಣಸ್ವಾಮಿ, ಐತಂಡಹಳ್ಳಿ ಅಂಬರೀಶ್, ನರಸಾಪುರ ರೆಹಮಾನ್, ಮಂಜುನಾಥರೆಡ್ಡಿ, ಟಿಪ್ಪು, ಪುತ್ತೇರಿ ರಾಜು, ಸುಬ್ರಮಣಿ, ಸುರೇಂದ್ರ, ಅಶೋಕ್ ಮತ್ತಿತರರಿದ್ದರು.



