ಕೋಲಾರ: ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ ಅಬ್ಬಿಸಿ ಅಮಾಯಕ ಜನರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕರ ಪತ್ರ ಮತ್ತು ಧ್ವನಿ ವರ್ಧಕ ಪ್ರಚಾರದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿ ಆಡಿಷನಲ್ ಎಸ್ಪಿ ರಾಜೀವ್ರವರಿಗೆ ಮನವಿ ಮಾಡಿ ಒತ್ತಾಯಿಸಲಾಯಿತು.
ಬಳಿಕ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಆಂಧ್ರ ಮತ್ತು ತಮಿಳು ನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಅಬ್ಬಿರುವ ಮಕ್ಕಳ ಕಳ್ಳರ ವದಂತ್ತಿ ಈಗ ಅಮಾಯಕ ಜನರ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ಹೋಗಿದೆ. ಮತ್ತೊಂದೆಡೆ ಬಿಹಾರ ಮತ್ತಿತರ ರಾಜ್ಯಗಳ ಕೆಲವು ಪೋಟೋಗಳನ್ನು ಕೆಲವು ಕಿಡಿಗೇಡಿಗಳು ವಾಟ್ಸಾಫ್ ಮತ್ತು ಫೇಸ್ಪುಸ್ತಕದಲ್ಲಿ ಅಪ್ಲೋಡ್ ಮಾಡಿ ಭೀತಿ ಹುಟ್ಟಿಸುತ್ತಿದ್ದು, ಅಮಾಯಕರಿಗೆ ಪ್ರಾಣ ರಕ್ಷಣೆ ಇಲ್ಲದಂತಾಗಿದೆ ಎಂದು ಹೇಳಿದರು.
ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ಕರೆದು ಕೂಡಲೇ ಪತ್ರಿಕಾ ಗೋಷ್ಠಿ ನಡೆಸುವ ಜತೆಗೆ ಜಿಲ್ಲಾದ್ಯಂತ ಎಲ್ಲಾ ಠಾಣೆಗಳ ಅಧಿಕಾರಿಗಳನ್ನು ಸಭೆ ಕರೆದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು ಇಂತಹ ಅನುಮಾನಸ್ಪದ ವ್ಯಕ್ತಿಗಳು ಕಂಡರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಕರ ಪತ್ರದ ಮುಖಾಂತರ ಜನ ಜಾಗೃತಿ ಮೂಡಿಸಿ, ಆಗುತ್ತಿರುವ ಅನಾಹುತಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಆಡಿಷನಲ್ ಎಸ್ಪಿ ರಾಜೀವ್ ಮಾತನಾಡಿ, ಸುಳ್ಳು ಸುದ್ದಿಗಳನ್ನು ಎಬ್ಬಿಸುತ್ತಿರುವ ವಾಟ್ಸಪ್ ಮತ್ತು ಪೇಸ್ಬುಕ್ ಆಡ್ಮಿನ್ಗಳ ವಿರುದ್ಧ ಕೇಸು ದಾಖಲಿಸಿ ಹಾಗೂ ಪೋಲಿಸರಿಗೆ ಮಾಹಿತಿ ನೀಡದೆ ಅಮಾಯಕರನ್ನು ಹೊಡೆದು ಸಾಯಿಸುವ ಸಾರ್ವಜನಿಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಕರಪತ್ರ ಮತ್ತು ಧ್ವನಿವರ್ಧಕಗಳ ಮುಖಾಂತರ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಪುರುಷೋತ್ತಮ್, ಕೆಂಬೋಡಿ ಕೃಷ್ಣೇಗೌಡ, ಮುರಳಿ, ಈಕಂಬಳ್ಳಿ ಮಂಜುನಾಥ್ ಮತ್ತಿತರರಿದ್ದರು.

