ಸುದ್ದಿ9ಕೈಕಂಬ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್) ನಿಂದ ಕಲ್ಪಿಸಲಾಗಿದ್ದ ಇಂಟೆರ್ನೆಟ್ ಜಾಲದಲ್ಲಿ ಸಮಸ್ಯೆ ಉಂಟಾಗಿದ್ದು ಕಳೆದ ಮೂರು ತಿಂಗಳಿನಿಂದ ಇಂಟೆರ್ನೆಟ್ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗುರುಪುರ ಕೈಕಂಬ, ಪೊಳಲಿ, ಗಂಜಿಮಠ, ವಾಮಂಜೂರು ವ್ಯಾಪ್ತಿಯಲ್ಲಿ ಇಂಟೆರ್ನೆಟ್ ಆಗಾಗ ಕೈ ಕೊಡುತ್ತಿದ್ದು, ಈ ಬಗ್ಗೆ ಕೈಕಂಬದಲ್ಲಿರುವ ದೂರವಾಣಿ ಕೇಂದ್ರಕ್ಕೆ ದೂರಿತ್ತರೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.

ಅಲ್ಲದೆ ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಈಗಾಗಲೇ ಸತ್ತು(ಡೆಡ್) ಆಗಿದ್ದು, ಇದುವರೆಗೂ ಅದನ್ನು ಜೀವಂತಗೊಳಿಸುವಲ್ಲಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಆದರೆ ತಿಂಗಳ ಬಿಲ್ ಪೋಸ್ಟ್ ಮುಖಾಂತರ ಬರುತ್ತಿದ್ದು, ಅದನ್ನು ಕಟ್ಟದೇ ಇದ್ದರೇ ಸ್ವತಃ ಇಲಾಖೆಯೇ ಮುಂದಾಗಿ ವಶೀಲಿಬಾಜಿಗೆ ಇಳಿಯುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಗಂಜಿಮಠದಲ್ಲಿ ಐಟಿ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕೈಕಂಬದ ರಸ್ತೆಯನ್ನು ಒಂದು ತಿಂಗಳಿನಿಂದ ಅಗೆಯಲಾಗುತ್ತದೆ. ಇದರಿಂದಾಗಿ ಬಿಎಸ್ಎನ್ಎಲ್ ತಂತಿಗಳು ತುಂಡಾಗಿದ್ದು ಅದನ್ನು ಜೋಡಿಸಲು ಇಲಾಖೆ ಮುಂದಾಗಿಲ್ಲ.
ಬಿಎಸ್ಎನ್ಎಲ್ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರೆ ನಮಗೆ ಹೊಸ ತಂತಿ ಅಳವಡಿಸಲು ಮೇಲಾಧಿಕಾರಿಗಳು ಸೂಚಿಸಿಲ್ಲ. ಹಳೆ ತಂತಿ ತುಂಡಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಹಳೆ ತಂತಿಯನ್ನೇ ಉಪಯೋಗಿಸಲು ಜೋಡಿಸಲು ಮೇಲಧಿಕಾರಿಗಳು ತಿಳಿಸಿದ್ದಾರೆ. ಎಂದು ಅವಲತ್ತುಕೊಂಡಿದ್ದಾರೆ.
ಈಗಾಗಲೇ ಬಿಎಸ್ಎನ್ಎಲ್ ಮೋಡಾಂ ಸಂಪರ್ಕ ಕಡಿತ ಸಾಧಿಸಿದ್ದು, ಇಲ್ಲಿ ಒಟ್ಟಾರೆ 3000ದಷ್ಟಿದ್ದ ಸಂಪರ್ಕ ವ್ಯವಸ್ಥೆ 1000ಕ್ಕಿಂತಲೂ ಕಡಿಮೆಯಾಗಿದೆ. ಮುಂದಿನ ದಿನಗಳಿಂದ ಮತ್ತಷ್ಟು ಸಂಪರ್ಕ ಕಡಿತಗೊಳಿಸುವ ಬಗ್ಗೆ ಮಾತಾಡಿಕೊಳ್ಳುತ್ತಿರುವ ಗ್ರಾಹಕರು ಬೇರೆ ಕಂಪೆನಿಯ ವ್ಯವಸ್ಥೆ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಕೈಕಂಬದಲ್ಲಿ ಆಗಾಗ ರಸ್ತೆಗಳನ್ನು ಅಗೆಯಲಾಗುತ್ತಿರುವುದರಿಂದ ತಂತಿಗಳು ತುಂಡಾಗುತ್ತಿವೆ. ಇದನ್ನು ರಸ್ತೆ ಅಗೆಯುವ ಕಂಪೆನಿಗಳಿಂದಲೇ ತಂತಿ ಜೋಡಿಸುವ ವ್ಯವಸ್ಥೆ ಮಾಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
