ಮಂಗಳೂರು: ಭಾರತ ಚುನಾವಣಾ ಆಯೋಗದ ದ.ಕ. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ ಎ. 5 ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ, ‘ನಾನು ಮತ ಚಲಾಯಿಸುತ್ತೇನೆ’ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಜರಗಲಿದೆ.
ಹಿರಿಯ ಹಾಸ್ಯ ಸಾಹಿತಿ ಎಚ್. ಡುಂಡಿರಾಜ್ ಸಮಾರಂಭವನ್ನು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸುವರು. ಪ್ರಸಿದ್ಧ ಆರ್ಥೊಪೆಡಿಕ್ ತಜ್ಞ ಹಾಗೂ ಹಿರಿಯ ಸಾಮಾಜಿಕ ದುರೀಣ ಡಾ. ಶಾಂತಾರಾಮ ಶೆಟ್ಟಿಯವರು ಮತದಾನದ ಬಗ್ಗೆ ಜಾಗೃತಿ ಸಂದೇಶವನ್ನು ನೀಡಲಿರುವರು. ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ. ಆರ್.ರವಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಬಿ. ಆರ್. ರವಿಕಾಂತೇ ಗೌಡ, ಪ್ರಧಾನ ಆಭ್ಯಾಗತರಾಗಿ ಉಪಸ್ಥಿತರಿರುವರು.
ವಿದ್ಯಾರ್ಥಿ ಬಳಗವನ್ನೇ ಪ್ರಧಾನವಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿದ್ದು, ಯುವಜನತೆಯಲ್ಲಿ ಮತದಾನದ ಬಗೆಗಿನ ಜವಾಬ್ದಾರಿಯ ಅರಿವು ಮೂಡಿಸಲು ಈ ಕಾರ್ಯಕ್ರಮವು ಸಹಕಾರಿಯಾಗಲಿದೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ ಕಾರ್ಯಕ್ರಮ ನಿರೂಪಿಸಲಿದ್ದು. ಪೊಳಲಿ ನಿತ್ಯಾನಂದ ಕಾರಂತ ಮತ್ತು ದಯಾನಂದ ಕಟೀಲ್ ಸಹಕರಿಸಲಿದ್ದಾರೆ.
