ಮಂಗಳೂರು: ಭಾರತ ಚುನಾವಣಾ ಆಯೋಗ ಹಾಗೂ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ‘ನನ್ನ ಮತ ನನ್ನ ಧ್ವನಿ’ ಸಂಚಾರ ವಾಹನ ಜಾಥಾಕ್ಕೆ ಜಿಲ್ಲಾ ಸತ್ರ ನ್ಯಾಯದೀಶ ಮಲ್ಲಣ್ಣ ಗೌಡ ಮಂಗಳವಾರ ಮನಪಾ ಕಚೇರಿ ಎದುರು ಚಾಲನೆ ನೀಡಿದರು.
ಈ ವೇಳೆ ದ.ಕ. ಜಿಪಂ ಸಿಇಒ ಹಾಗೂ ಸ್ವೀಪ್ ಅಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ದ.ಕ. ಜಿಲ್ಲಾದ್ಯಂತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಮಂಗಳೂರಿನಲ್ಲಿ ಮತದಾನದ ಬಗ್ಗೆ ಜಾಗೃತಿಗಾಗಿ ಸಂಚಾರ ವಾಹನ ಜಾಥಾ ಆರಂಭಿಸಲಾಗಿದೆ. ಜಿಲ್ಲೆಯ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಮತದಾನದ ಬಗ್ಗೆ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುವ, ಜಾಗೃತಿ ಮೂಡಿಸುವ ಧ್ವನಿಮುದ್ರಿಕೆಗಳನ್ನು ಈ ವಾಹನ ಒಳಗೊಂಡಿದೆ ಎಂದವರು ವಿವರಿಸಿದರು.
ಈ ವಾಹನವು ಮುಖ್ಯವಾಗಿ ಮಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ಅದರಲ್ಲೂ 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಹಾಗೂ ಪಾಲಿಕೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.






