ಬಡಗಬೆಳ್ಳೂರು : ಕುಟುಂಬದ ದೈವಾರಾದನೆಯಂದು ಕುಟುಂಬಿಕರು ಮೂಲ ಮನೆಯಲ್ಲಿ ಸೇರಿ `ಮುಡಿಪು ಕಟ್ಟುವ'(ಹಿತ್ತಾಳೆ ಪಾತ್ರೆಯಲ್ಲಿ ಹಣ ಕರಿಮೆಣಸು, ನಾಣ್ಯ(ಪಣವು) ಹಾಕುವುದು) ಸಂಪ್ರದಾಯವೊಂದಿದೆ. ತುಳುನಾಡಿನಲ್ಲಿ ಈಗಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ.
ಬಡಗಬೆಳ್ಳೂರು ಗ್ರಾಮದ ಪರಿಮೊಗರು ಎಂಬಲ್ಲಿನ ಕುಕ್ಯಾನ್ ಕುಟುಂಬಿಕರು ತಮ್ಮ ವಾರ್ಷಿಕ ದೈವಾರಾದನೆಯ ಪೀಠಿಕೆಯಾಗಿ ಕುಟುಂಬಿಕರ ಮನೆಯಲ್ಲಿ ಮುಡಿಪು ಕಟ್ಟಿದರು. ಈ ಸಂದರ್ಭದಲ್ಲಿ ಎಲ್ಲರೂ ದೈವ ದೇವರಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಡಿಪಿಗೆ ಕರಿಮೆಣಸು ಹಾಗೂ ಪುಂಡಿ ಪಣವು(ಹಿಡಿಹಣ ಕಾಣಿಕೆ) ಹಾಕಿ ತುಳಸಿಕಟ್ಟೆಗೆ ತಿರುಪತಿ ತಿಮ್ಮಪ್ಪನಿಗೆ ಗೋವಿಂದ ಹಾಕತ್ತಾ ಮೂರು ಸುತ್ತು ಬಂದು ಮನೆಯಲ್ಲಿರುವ ದೈವಗಳ ಕೋಣೆಯಲ್ಲಿ ಭದ್ರವಾಗಿ ಇಡಲಾಗುವುದು.
ಇದನ್ನು ಮುಂದಿನ ವರ್ಷದ ಭೂತದ(ದೈವಾರಾಧನೆ) ವೇಳೆ ಬಿಡಿಸಿ, ಪುನಾ: ಪಣವು ಸೇರಿಸಲಾಗುತ್ತದೆ. ಮುಡಿಪು ಹಿತ್ತಾಳೆ ಪಾತ್ರೆಯಲ್ಲಿ ಹಣ ತುಂಬಿದ ವರ್ಷ ಕುಟುಂಬಿಕರೊಂದಿಗೆ ತಿರುಪತಿಗೆ ತೆಗೆದುಕೊಂಡು ಹೋಗಿ ದೇವರಿಗೆ ಸಮರ್ಪಣೆ ಮಾಡಲಾಗುವುದು. ಮುಡಿಪು ಕಟ್ಟಿದ ದಿವಸವೇ ರಾತ್ರಿ ಕುಟುಂಬದ ದೈವಗಳ ಆರಾಧನೆ(ಭೂತ ಪರ್ವ) ನಡೆಯುತ್ತದೆ.
