ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ
ಮಂಗಳೂರು, : ಪ್ರಜಾಪ್ರಭುತ್ವ ದಿನದಂದು ರಾಷ್ಟ್ರ ಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದ.ಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕವಾಗಿದ್ದು ಸಮಸ್ತ ಭಾರತೀಯರಿಗೆ ಪೂಜನೀಯವಾಗಿದೆ. ಆದರೆ ಇದರ ಬಳಕೆಯ ಮೇಲೆ ನಿಯಂತ್ರಣವಿಲ್ಲ. ಇದರಿಂದ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅಥವಾ ಕಾಗದದ ಧ್ವಜಗಳು ರಸ್ತೆಯ ಮೇಲೆ, ಸಣ್ಣ ಅಂಗಡಿಗಳಲ್ಲಿ ಮಾರಾಟಕ್ಕೆ ಕಂಡು ಬರುತ್ತವೆ. ಜನವರಿ 26 ಅಥವಾ ಆಗಸ್ಟ 15 ಕ್ಕೆ ಮುಂಚಿತವಾಗಿ ಮಕ್ಕಳು ಅಥವಾ ಹಿರಿಯರು ಪ್ಲಾಸ್ಟಿಕ್ ಧ್ವಜಗಳನ್ನು ಖರೀದಿಸುತ್ತಾರೆ ಆದರೆ ಈ ಧ್ವಜಗಳಿಗೆ ಗೌರವ ನೀಡುವುದಿಲ್ಲ ಇದರಿಂದ ಸಮಾರಂಭದ ಉತ್ಸಾಹವು ಮುಗಿದನಂತರ ಅಂತಹ ಧ್ವಜಗಳು ರಸ್ತೆಯ ಬದಿಯಲ್ಲಿ ಹಾಗೂ ಚರಂಡಿಗಳಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಇದರಿಂದ ದೇಶಭಕ್ತಿಯ ಮಹತ್ತ್ವವು ಕಡಿಮೆಯಾಗುತ್ತದೆ ಹಾಗೂ ವಸ್ತುಶಃ ಇದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರರ ಬಲಿದಾನದ ಅಪಮಾನವೇ ಆಗಿದೆ. ಇದರಿಂದ ಇದು ದೇಶದ ಐಕ್ಯತೆಗೆ ಕಾರಣವಾದ ರಾಷ್ಟ್ರಭಕ್ತಿಗೆ ಅತ್ಯಂತ ದೊಡ್ಡ ಗಂಡಾಂತರವಾಗಿದೆ.

ಆದುದರಿಂದ, ಈಗ ಎಲ್ಲರಲ್ಲಿ ಜಾಗೃತಿಯನ್ನು ಮೂಡಿಸುವ ಸಮಯ ಬಂದಿದೆ ಮತ್ತು ಪರಿಸರ ಮಾಲಿನ್ಯ ಮತ್ತು ರಾಷ್ಟ್ರಧ್ವಜದ ವಿಡಂಬನೆಯನ್ನು ತಡೆಗಟ್ಟಲು ಪ್ಲಾಸ್ಟಿಕ್ ಧ್ವಜಗಳ ಮೇಲೆ ನಿರ್ಬಂಧ ಹೇರುವುದು ಅವಶ್ಯಕವಾಗಿದೆ.
ಮಾನ್ಯ ಮುಂಬಯಿ ಉಚ್ಛ ನ್ಯಾಯಾಲಯದಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ಯು ರಾಷ್ಟ್ರಧ್ವಜದ ಅಪಮಾನ ಮತ್ತು ಪ್ಲಾಸ್ಟಿಕ್ ಧ್ವಜಗಳ ಮೇಲೆ ನಿರ್ಬಂಧ ಹೇರುವ ಕುರಿತು ಸಾರ್ವಜನಿಕ ಹಿತಾಸಕ್ತಿ ಕಾಯಿದೆಯ ಪಿಐಎಲ್ ನಂ. 103 ಆಪ್ 2011 ಮೂಲಕ ಸನ್ಮಾನ್ಯ ಬಾಂಬೆ ಉಚ್ಚನ್ಯಾಯಾಲಯದಲ್ಲಿ, ರಾಷ್ಟ್ರಧ್ವಜದ ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಹಾಗೂ ಪ್ಲಾಸ್ಟಿಕ್ ಧ್ವಜದ ಉತ್ಪಾದನೆ, ಮಾರಾಟ ಹಾಗೂ ಬಳಕೆಯ ಮೇಲೆ ನಿರ್ಬಂಧ ಹೇರುವಂತೆ ಮನವಿಮಾಡಿ ಒಂದು ಖಟ್ಲೆಯನ್ನು ದಾಖಲಿಸಿತ್ತು.
ಸನ್ಮಾನ್ಯ ನ್ಯಾಯಾಲಯವು ಅರ್ಜಿಯನ್ನು ಸಹಾನುಭೂತಿಯಿಂದ ವಿಚಾರಿಸಿ ರಾಷ್ಟ್ರಧ್ವಜದ ಬಳಕೆಯ ಬಗ್ಗೆ ಜಾಗೃತಿಯನ್ನು ನಿರ್ಮಿಸಲು ಮಹಾರಾಷ್ಟ್ರ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಉತ್ಪಾದನೆಯನ್ನು ನಿರ್ಬಂಧಿಸಲು ಕಾನೂನಿನಲ್ಲಿ ಆವಶ್ಯಕ ಸುಧಾರಣೆಗಳನ್ನು ಮಾಡಲು ತಿಳಿಸಿದೆ. ಅದಕ್ಕಾಗಿ ಭಾರತ ಸರಕಾರವು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೇಲಿನ ಸಂದರ್ಭದಲ್ಲಿ ಅವರ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿರುತ್ತದೆ.
ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡಲು ಮನವಿಯಲ್ಲಿ ಮುಂದಿನಂತೆ ವಿನಂತಿಸಲಾಗಿದೆ.
1. ಈ ಪ್ರಕರಣವನ್ನು ಪರಿಶೀಲಿಸಿ ಭಾರತ ಸರಕಾರವು ಪ್ಲಾಸ್ಟಿಕ್ ಧ್ವಜದ ಉತ್ಪಾನೆಯ ಮೇಲೆ ಹಾಗೂ ಮಾರಾಟದ ಮೇಲೆ ನಿರ್ಬಂಧ ಹಾಕಲು ಕೇಂದ್ರದ ಕಾನೂನಿನಲ್ಲಿ ಅವಶ್ಯಕ ಸುಧಾರಣೆಗಳನ್ನು ತರಬೇಕೆಂದು ಭಾರತ ಸರಕಾರಕ್ಕೆ ಮನವಿ ಮಾಡಬೇಕು.
2. ಜನರಲ್ಲಿ ರಾಷ್ಟ್ರಧ್ವಜದ ಅವಮಾನ ತಡೆಯಲು ಮಹಾರಾಷ್ಟ್ರ ಸರಕಾರ, ತೆಲಂಗಾಣ ಸರಕಾರವು ಮಾಡಿದಂತೆ ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳಲ್ಲೂಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು.
3. ಮೇಲಿನ ಎಲ್ಲಾ ವಿಷಯಗಳಿಗೆ ಯೋಗ್ಯ ಕ್ರಮ ಕೈಗೊಳ್ಳಬೇಕು.
ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ, ಶ್ರೀ. ಪ್ರಭಾಕರ್ ನಾಯ್ಕ್. ಶ್ರೀ. ಮಾಂಗಿರಾಮ್, ಶ್ರೀ. ಯೋಗೀಶ್, ಶ್ರೀ. ರಾಜೇಶ್ ಸೌ. ಪ್ರಮೀಳ, ತುಳುನಾಡ ರಕ್ಷಣಾ ಸಮಿತಿಯ ಜ್ಯೋತಿ ಜೈನ್ ಮೊದಲಾದವರು ಉಪಸ್ಥಿತರಿದ್ದರು.
