ಕೈಕಂಬ: ಹಣ, ಆಸ್ತಿ ಇದ್ದರೆ ಸಾಲದು. ಸಂಸ್ಕøತಿವಂತರಾಗಬೇಕು. ಅದಿಲ್ಲದೆ ಹೋದರೆ ಬದುಕು ಗೊಂದಲಮಯವಾಗಿ ಜೀವನಕ್ಕೆ ಗೊತ್ತುಗುರಿ ಇಲ್ಲದಂತಾಗುತ್ತದೆ ಎಂದು ಕಟೀಲು ಎಸ್ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ ಹೇಳಿದರು.ಗುರುಪುರ ವಜ್ರದೇಹಿ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ `ಸ್ವಾಮಿ ವಿವೇಕಾನಂದ ವೇದಿಕೆ’ಯಲ್ಲಿ ಶ್ರೀ ವಜ್ರದೇಹಿ ಬಳಗ ಗುರುಪುರ ಇದರ ಷಷ್ಠಮ ವಾರ್ಷಿಕೋತ್ಸವ, `ಶ್ರೀ ಹನುಮ ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ಸವಲತ್ತು ವಿತರಣೆ’ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಪರಂಪರೆ, ಸಂಸ್ಕøತಿ ದೊಡ್ಡದು. ಹಿಂದೂ ಸಮಾಜ ಒಡೆಯುವ ಕೆಲಸಗಳು ನಡೆಯುತ್ತಿವೆ. `ಹಿಂದೂ’ ಎಂದರೆ ಒಂದು ಅಜೆಂಡ ಎಂದು ವಿರೋಧಿಗಳು ಬಣ್ಣಿಸುತ್ತಿದ್ದಾರೆ. ಹಿಂದೂ ಧರ್ಮ ಉಳಿಯಬೇಕಿದ್ದರೆ ಕೆಲವೊಮ್ಮ ಹೋರಾಟ ಉಗ್ರಗೊಳಿಸಬೇಕಾಗುತ್ತದೆ. ಲವ್ ಜಿಹಾದ್ ವಿರುದ್ಧ ಹಿಂದೂಗಳ ಹೋರಾಟ ಸಮರ್ಥನೀಯ ಎಂದು ಮುಖ್ಯ ಅತಿಥಿ, ಮಂಗಳೂರು ವಕೀಲ ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.
ಜೀವನದಲ್ಲಿ ಕಾರ್ಯ ಸಾಧನೆಗೆ ಗುರಿಯೊಂದಿರಬೇಕು. ಹಿಂದೂ ಸಂಸ್ಕøತಿ ಮೇಲೆ ಅನ್ಯ ಧರ್ಮೀಯರಿಂದ ನಡೆಯುತ್ತಿರುವ ಆಕ್ರಮಣ ಧ್ವನಿ ಎತ್ತುವ ರಾಜಶೇಖರಾನಂದರಂತಹ ಸ್ವಾಮಿಗಳು ಈಗಲೂ ಇದ್ದಾರೆ ಎಂಬುದು ನಮ್ಮ ಭಾಗ್ಯ. ಗುರುಗಳ ಮಾರ್ಗದರ್ಶನದಲ್ಲಿ ಸಮರ್ಥ ಭಾರತ ಕಟ್ಟಬೇಕು. ಪ್ರಸಕ್ತ ವಿದ್ಯಮಾನ ಕಂಡಾಗ ನಿದ್ದೆಯಲ್ಲಿರುವ ಹಿಂದೂ ಸಮಾಜ ಎದ್ದೇಳಲೇಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಪಶ್ವಾತ್ತಾಪ ಪಡಬೇಕಾದೀತು ಎಂದು ಶ್ರೀ ವಜ್ರದೇಹಿ ಬಳಗದ ಸದಸ್ಯ ಶ್ಯಾಮಪ್ರಸಾದ್ ಭಟ್ ಅಡ್ಯಾರುಪದವು ಹೇಳಿದರು. ರಂಗಕರ್ಮಿ ನವೀನ್ ಶೆಟ್ಟಿ ಅಳಕೆ ಮಾತನಾಡಿದರು.
ಈ ಸಂದರ್ಭದಲ್ಲಿ ಸನ್ಮಾನಕ್ಕೆ ಉತ್ತರವಾಗಿ ಹರಿಕೀರ್ತನಾದಾಸ ಕುಳಾಯಿ ವಾದೀಶ್ ಆಚಾರ್ಯ ಮಾತನಾಡುತ್ತ, ಯಾವುದೇ ಒಂದು ಕಾರ್ಯ ನಡೆಯಬೇಕಿದ್ದರೆ ಕಾರಣ ಬೇಕಾಗುತ್ತದೆ. ಸದ್ಯದ ಮಟ್ಟಿಗೆ ಸಾವು ಗೆದ್ದು ಬಂದಿರುವ ನನಗೆ ಇಲ್ಲಿ ಸನ್ಮಾನ ಸ್ವೀಕರಿಸಲು ಅಮಿತ ಆನಂದವಾಗುತ್ತದೆ. ಇದು ದೈವೇಚ್ಚೆಯೇ ಸರಿ. ಸತ್ಯ ಮತ್ತು ಧರ್ಮದಿಂದ ನಡೆದರೆ, ಅವರ ಜೀವನ ಪಾವನವಾಗುತ್ತದೆ ಎಂದರು. ವೇದಿಕೆಯಲ್ಲಿ ನವೀನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಮಂಗಳೂರಿನ ಜೈ ಮಾತಾ ಕಲಾ ತಂಡದಿಂದ `ನನ ದಾದ ಮಲ್ಪುನ್ …?’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಈ ದೇಶದಲ್ಲಿ ಈಗ ಮತಾಂತರ `ಲವ್ ಜಿಹಾದ್’ ಸ್ವರೂಪ ಪಡೆದಿದೆ. ಇದರ ವಿರುದ್ಧ ಹಿಂದೂ ಸಮಾಜದಿಂದ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಮನೆಯಿಂದಲೇ `ಜಾಗೃತಿ ಭಾವ’ ಹುಟ್ಟಬೇಕು. ಮದರ್ ತೆರೆಸಾ ಸಾಮಾಜಿಕ ಕಾಳಜಿಯಿಂದ ದೀನದಲಿತರ ಏಳಿಗೆಗೆ ಕೆಲಸ ಮಾಡಿ ಈ ದೇಶದ ಸರ್ವೋಚ್ಛ ಪ್ರಶಸ್ತಿ ಭಾರತ ರತ್ನ ಪಡೆದಿದ್ದರೂ, ಅವರು ಸಮಾಜ ಸೇವೆಯ ಹೆಸರಲ್ಲಿ ನಡೆಸಿರುವ ಮತಾಂತರ ಯಾರಿಗೂ ತಿಳಿದಿಲ್ಲ. ಸಾಮಾಜಿಕ ಜಾಲಗಳನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕೇ ಹೊರತು ಧರ್ಮ ನಿಂದನೆಗಲ್ಲ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಅಭಿಪ್ರಾಯಪಟ್ಟರು.
