ಗುರುಪುರ : ಗಾಂಧಿ ಜಯಂತಿಯಾದ ಅ. 2ರಂದು ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ 13 ಅಂಗನವಾಡಿಗಳಲ್ಲಿ ರಾಜ್ಯ ಸರ್ಕಾರದ ಮಾತೃಪೂರ್ಣ-ಅನ್ನಭಾಗ್ಯ ಯೋಜನೆ ಆರಂಭಗೊಂಡಿತು. ಇದೇ ವೇಳೆ ಅಡ್ಡೂರು ಬಳಿಯ ನೂಯಿಯಲ್ಲಿ ಅಂಗನವಾಡಿಯೊಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.ನೂಯಿ, ತಾರಿಕರಿಯ, ಅಲೈಗುಡ್ಡೆ, ನಡುಗುಡ್ಡೆ, ಬಂಗ್ಲೆಗುಡ್ಡೆ, 133ನೇ ಸೈಟ್, ಗುರುಪುರ ಪೇಟೆ, ಕುಚ್ಚುಗುಡ್ಡೆ(ಅಡ್ಡೂರು), ಅಡ್ಡೂರು ಗುಡ್ಡೆ, ಕಾಂಜಿಲಕೋಡಿ, ವಿಕಾಸನಗರ ಸಹಿತ ಒಟ್ಟು 13 ಅಂಗನವಾಡಿಗಳಲ್ಲಿ ಈ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ನೂಯಿಯ ಬಾಲವಿಕಾಸ ಅಂಗನವಾಡಿಯನ್ನು ಜಿಪಂ ಸದಸ್ಯ ಯು ಪಿ ಇಬ್ರಾಹಿಂ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಪಂ ಸದಸ್ಯ ಸಚಿನ್ ಅಡಪ, ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಸಂಪ, ಹರಿಶ್ಚಂದ್ರ, ಯಶವಂತ ಶೆಟ್ಟಿ, ಹನೀಫ್, ಪದ್ಮಿನಿ ಮೊದಲಾದವರು ಇದ್ದರು.ಮಾತೃಪೂರ್ಣ ಯೋಜನೆಗೆ ಚಾಲನೆ ನೀಡುತ್ತ ಮಾತನಾಡಿದ ಇಬ್ರಾಹಿಂ ಮತ್ತು ಭಟ್ ಈ ಯೋಜನೆಯ ಯಶಸ್ವಿಗೆ ಬಾಣಂತಿಯರು, ಗರ್ಭಿಣಿಯರು ಅಂಗನವಾಡಿ ಸಹಾಯಕರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಾತೃಪೂರ್ಣ ಯೋಜನೆಯ ಪ್ರಯೋಜನದ ಬಗ್ಗೆ ಆರೋಗ್ಯ ಕೇಂದ್ರದ ಸಹಾಯಕಿ ಪವಿತ್ರಾ ವಿವರಿಸಿದರು. ಅಂಗನವಾಡಿ ಸಿಬ್ಬಂದಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

ಗುರುಪುರ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಹಾಯಕಿ ಮಲ್ಲಿಕಾ ವಿವರಿಸಿದರು. ಈ ಸಂದರ್ಭದಲ್ಲಿ ಲೋಲಾಕ್ಷ, ನಳಿನಿ ಶೆಟ್ಟಿ, ದೀಪಕ್ ಇದ್ದರು. ಇದೇ ರೀತಿ ನಡುಗುಡ್ಡೆ, ಅಲೈಗುಡ್ಡೆ ಹಾಗೂ ಇತರೆಡೆ ಇಂದಿನಿಂದಲೇ ಇಂದಿನಿಂದಲೇ ಯೋಜನೆ ಕಾರ್ಯಗತಗೊಂಡಿತು. ಜಿಲ್ಲೆಯ ಭೌಗೋಳಿಕ ಸ್ಥಿತಿಗತಿ, ಆಚಾರ-ವಿಚಾರಗಳಿಗನುಸಾರವಾಗಿ ಅವಲೋಕಿಸಿದಾಗ ಈ ಯೋಜನೆಯಲ್ಲಿ ಕೆಲವು ಗೊಂದಲಗಳಿವೆ. ಗರ್ಭಿಣಿಯರು, ಬಾಣಂತಿಯರು ಮಧ್ಯಾಹ್ನದ ಬಿಸಿಯೂಟಕ್ಕಾಗಿ ನಡೆದುಕೊಂಡು ಬರಲಿಕ್ಕೆ ಕಷ್ಟವಾಗಲಿದೆ. ಟಿಫನ್ ವ್ಯವಸ್ಥೆ ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು. ಯೋಜನೆ ಉತ್ತಮವಾಗಿದ್ದರೂ, ಇದರಲ್ಲಿ ಒಂದಷ್ಟು ಬದಲಾವಣೆ ಅವಶ್ಯ” ಎಂದು ಗುರುಪುರ ನಿವಾಸಿ ನಳಿನಿ ಶೆಟ್ಟಿ ಅಭಿಪ್ರಾಯಪಟ್ಟರು.

