ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೀಡಾಗಿ ಒಂದು ದಿನ ಕಳೆಯುತ್ತಿದ್ದಂತೆ ಹತ್ಯೆ ಕುರಿತು ಆತಂಕಕಾರಿ ಸಂಗತಿಗಳು ಹೊರ ಬೀಳುತ್ತಿವೆ. ರಿಪಬ್ಲಿಕ್ ಟಿವಿಯ ಆರ್ನಬ್ ಗೋಸ್ವಾಮಿಗೆ ನೀಡಿರುವ ಸಂದರ್ಶನದಲ್ಲಿ ಇಂದ್ರಜೀತ್ ತಮ್ಮ ಸಹೋದರಿ ಗೌರಿಯ ಹತ್ಯೆ ಬಗ್ಗೆ ಆಘಾತಕಾರಿ ಅಂಶಗಳನ್ನು ಹೊರ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಬಾಯಿ ಬಡುಕನಂತೆ ಮಾತನಾಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇಂದ್ರಜೀತ್ ತರಾಟೆಗೆ ತೆಗೆದುಕೊಂಡಿದ್ದಾರೆ.ಮೊದಲಿಗೆ ರಾಹುಲ್ ಬಗ್ಗೆ ಹೇಳುವುದಾದರೆ “ಮಿಸ್ಟರ್ ರಾಹುಲ್ ನನ್ನ ಸಹೋದರಿಯ ಹತ್ಯೆ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಬೇಡಿ. ಹಂತಕರು ಇವರೇ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿದ್ದಲ್ಲಿ/ಮಾಹಿತಿ ಇದ್ದಲ್ಲಿ ಅದನ್ನು ನೇರವಾಗಿ Investigative Officerಗೆ ನೀಡಿ. ಇಲ್ಲದಿದ್ದಲ್ಲಿ ಬಾಯ್ಮುಚ್ಕೊಂಡು ಇರಿ” ಎಂದು ಇಂದ್ರಜೀತ್ ನೇರವಾಗಿ ರಾಹುಲ್ಗೆ ಝಾಡಿಸಿದ್ದಾರೆ. ಬೆಳಗ್ಗೆಯಷ್ಟೇ ರಾಹುಲ್ ಗಾಂಧಿ ಅವರು ಗೌರಿ ಹಂತಕರು ಬಿಜೆಪಿ/ಆರ್ಎಸ್ಎಸ್ ನವರು ಎಂದು ತಿಳಿಸಿದ್ದರು.
ಇನ್ನು, ಸಿದ್ದು ನೇತೃತ್ವದ ಕರ್ನಾಟಕ ಸರ್ಕಾರದ ಬಗ್ಗೆಯೂ ತಮ್ಮ ಅಸಮಾಧಾನ ಹೊರ ಹಾಕಿರುವ ಇಂದ್ರಜೀತ್, ರಾಜ್ಯ ಸರ್ಕಾರದ SIT ತನಿಖೆಯಲ್ಲಿ ತಮಗೆ ಯಾವುದೇ ವಿಶ್ವಾಸವಿಲ್ಲ. ಇದೇ ಸರಕಾರದ ಅವಧಿಯಲ್ಲಿ ಇಂತಹ ಪ್ರಕರಣಗಳು ಅನೇಕವು ನಡೆದಿವೆ. ಆದರೆ ಸತ್ಯ ಮಾತ್ರ ಹೊರಗೆ ಬರಲಿಲ್ಲ. ಹಾಗಾಗಿ ಗೌರಿ ಹತ್ಯೆ ಪ್ರಕರಣವನ್ನು CBIಗೇ ವಹಿಸಬೇಕೆಂದು ಗೌರಿಯ ತಮ್ಮನಾಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ.ಗೌರಿ ಹತ್ಯೆಯ ಬಗ್ಗೆ ಇಂದ್ರಜೀತ್ ಇನ್ನೂ ಒಂದು ಪ್ರಮುಖ ಅಂಶವನ್ನು ಹೇಳಿದ್ದಾರೆ. ಇದಂತೂ ನಿಜಕ್ಕೂ ನಾಡಿನ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸುವ ಸತ್ಯವಾಗಿದೆ. ಇಂದ್ರಜೀತ್ ರಿಪಬ್ಲಿಕ್ ಟಿವಿಗೆ ಹೇಳಿರುವ ಹಾಗೆ ಗೌರಿ ಲಂಕೇಶ್ಗೆ ಇತ್ತೀಚೆಗೆ ನಕ್ಸಲರಿಂದ Hate Mailಗಳು ಬರುತ್ತಿದ್ದವಂತೆ. ನಕ್ಸಲರು ಗೌರಿ ಲಂಕೇಶ್ ಬಗ್ಗೆ ತೀವ್ರವಾಗಿ ಅಸಮಾಧಾನಗೊಂಡಿದ್ದರಂತೆ. ಹಾಗಾಗಿ, ಗೌರಿ ಹತ್ಯೆಯ ಹಿಂದೆ ನಕ್ಸಲರ ಕೈವಾಡ ಇದೆ ಎಂದು ಇಂದ್ರಜೀತ್ ಅವರು ರಿಪಬ್ಲಿಕ್ ಟಿವಿಯ ಆರ್ನಬ್ ಗೋಸ್ವಾಮಿಗೆ ಇದೀಗ ತಾನೇ ತಿಳಿಸಿದ್ದಾರೆ.
