ಬಂಟ್ವಾಳ : ನಮ್ಮ ಮನಸ್ಸು ಆತ್ಮದ ಕಡೆಗೆ ಇರುತ್ತದೆ. ನಮ್ಮ ಒಳಗಿನ ಆತ್ಮ ಜಾಗೃತಿಯಾಗಬೇಕು. ಉಸಿರಾಟದ ನಿಯಂತ್ರಣಕ್ಕೆ ಪ್ರಾಣಾಯಾಮ ಮಾಡಿದಲ್ಲಿ ದೇಹದ ಆರೋಗ್ಯ ಸಹಜ ಸ್ಥಿತಿಯಲ್ಲಿರುತ್ತದೆ ಎಂದು ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತಿಳಿಸಿದರು.
ಅವರು ಮಾರಿಪಳ್ಳದ ಕುಲಾಲ ಸಮುದಾಯ ಭವನದಲ್ಲಿ ನಡೆದ ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ರಜತ ಮಹೋತ್ಸವ ಸವಿನೆನಪಿಗಾಗಿ ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಯೋಗ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ 30 ದಿನಗಳ ಉಚಿತ ಯೋಗ ಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫರಂಗಿಪೇಟೆ ಕುಲಾಲ ಸಂಘದ ಅಧ್ಯಕ್ಷೆ ಉಮಾಚಂದ್ರಶೇಖರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ, ಯೋಗ ಶಿಕ್ಷಕ ಧನಂಜಯ ಕೆ., ಪ್ರತಿಷ್ಠಾನದ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು. ತೇಜಸ್ವಿನಿ ಪ್ರಾರ್ಥನೆ ಮಾಡಿದರು. ಕೋಶಾಧಿಕಾರಿ ನಾರಾಯಣ ಬಿ. ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಕಮಲಾ ರಮೇಶ್ ವಂದಿಸಿದರು. ಕಾರ್ಯದರ್ಶಿ ಎಸ್. ವಿಶ್ವನಾಥ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
