ಉಡುಪಿ : “ ಕಳೆದ ಮೂರು ದಶಕಗಳ ಅವಧಿಯಲ್ಲಿ ಮಾದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆಗಳಾಗಿದ್ದು ಇದಕ್ಕೆ ಪತ್ರಿಕಾ ಮಾಧ್ಯಮ ಹೊರತಾಗಿಲ್ಲ. ಇಂದು ಸಮಾಜದ ಕುರಿತು ಮಾಧ್ಯಮಗಳ ಕಾಳಜಿ, ಜವಾಬ್ದಾರಿ ಹೆಚ್ಚಾಗಿದೆ. ಪತ್ರಕರ್ತರು ತಮ್ಮ ಪತ್ರಿಕಾ ಧರ್ಮದ ಜೊತೆಗೆ ಮಾನವೀಯ ಮೌಲ್ಯಗಳಿಗೆ, ಮಾನವಧರ್ಮಕ್ಕೆ ಮಹತ್ವ ನೀಡುವ ಅಗತ್ಯವಿದೆ” ಎಂದು ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಡಾ.ಯು.ಬಿ.ರಾಜಲಕ್ಷ್ಮೀ ಹೇಳಿದರು.
ಅವರು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ವಿಭಾಗದ ಸಂವಹನ ಸಂಘ ಮತ್ತು ಐ.ಕ್ಯೂ.ಎ.ಸಿ ಮತ್ತು ಗ್ರಂಥಾಲಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಿಕಾ ಪ್ರದರ್ಶನ-2017 ನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಸುಪಾಲ ಪ್ರೊ. ಬಿ. ಜಗದೀಶ ರಾವ್ “ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.ಬಹುಷ: ಈ ನಿಟ್ಟಿನಲ್ಲಿ ಅವರು ಪ್ರಯತ್ನಿಸಿದಲ್ಲಿ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗಿ ಮೂಡಿಬರಲು ಸಾಧ್ಯ ” ಎಂದು ಹೇಳಿದರು.
ಮುಖ್ಯ ಅಬ್ಯಾಗತ ಉಡುಪಿ ಪತ್ರಕರ್ತರ ವೇದಿಕೆ ಅದ್ಯಕ್ಷ ಶೇಖರ ಅಜೇಕಾರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಜೇಸಿ ತರಬೇತುದಾರ ರಾಘವೇಂದ್ರ ಪ್ರಭು ಕಾರ್ವಾಲು, ಪತ್ರಿಕೋದ್ಯಮ ವಿಭಾಗದ ಪ್ರಭಾರ ಮುಖ್ಯಸ್ಥೆ, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಜಯಲಕ್ಷ್ಮೀ, ಕಾಲೇಜು ಗ್ರಂಥಪಾಲಕಿ ಯಶೋದಾ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಅತಿಥಿ ಉಪನ್ಯಾಸಕ ಮಂಜಪ್ಪ ದ್ಯಾ. ಗೋಣಿ , ಕಾಲೇಜು ಆಂತರಿಕ ನಿರ್ವಹಣಾ ಸಮಿತಿ ಯ ಡಾ.ಗುರುರಾಜ್ ಪ್ರಭು ಕೆ ಕಾರ್ಯಕ್ರಮ ಸಂಯೋಜಿಸಿದ್ದರು.
ವಿಭಾಗದ ಪ್ರಭಾರ ಮುಖ್ಯಸ್ಥೆ, ಜಯಲಕ್ಷ್ಮೀ ಸ್ವಾಗತಿಸಿ, ಅಂತಿಮ ಕಲಾಪದವಿ ವಿದ್ಯಾರ್ಥಿನಿ ಕು. ಸುಮಲತಾ ಕಾರ್ಯಕ್ರಮ ನಿರೂಪಿಸಿ, ಕು.ಪರಿಪೂರ್ಣ ವಂದಿಸಿದರು.ಕಾಲೇಜಿನ ಪ್ರಾಧ್ಯಾಪಕರು ವೃಂದ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಪತ್ರಿಕಾ ಪ್ರದರ್ಶನ-2017 ರಲ್ಲಿ ಕಾಲೇಜಿನ ಉಪನ್ಯಾಸಕ ಮಂಜಪ್ಪ ದ್ಯಾ. ಗೋಣಿಯವರ ಸಂಗ್ರಹಿಸಿದ ಸಂಸ್ಕ್ರತ, ಕನ್ನಡ,ಇಂಗ್ಲೀಷ್,ತುಳು,ತಮಿಳು,ತೆಲುಗು,ಮಲಯಾ¼ಮ್,ಕೊಂಕಣಿ,ಹಿಂದಿ,ಮರಾಠಿ,,ಚೈನೀಸ್ಭಾಷೆಯ 280 ಕ್ಕೂ ಅಧಿಕ ಸಂಖ್ಯೆಯ ದಿನಪತ್ರಿಕೆಗಳು, ನಿಯತಕಾಲಿಕಗಳು, ವಿವಿಧ ವಿಶ್ವ ವಿದ್ಯಾನಿಲಗಳ ,ಕಾಲೇಜುಗಳ ಪ್ರಾಯೋಗಿಕ ಪತ್ರಿಕೆಗಳು ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾದವು.
