ಬಂಟ್ವಾಳ, ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗುವ ಜಮೀನುಗಳ ರೈತರಿಗೆ ಶಾಸ್ವತ ಪರಿಹಾರ ನೀಡಲು ಅನುದಾನ ಬಿಡುಗಡೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಶೀರ್ಘದಲ್ಲೇ ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ತುಂಬೆ ವೆಂಟೆಡ್ ಡ್ಯಾಂಗೆ ಗುರುವಾರ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಪಾ ವತಿಯಿಂದ ಕೈಗೊಂಡ ಸರ್ವೇ ಪ್ರಕಾರ 4ರಿಂದ 5 ಮೀಟರ್ ನೀರು ಶೇಖರಣೆಯಿಂದ 49.93 ಎಕರೆ, 5ರಿಂದ 6 ಮೀಟರ್ಗೆ 51.41 ಎಕರೆ, 6ರಿಂದ 7 ಮೀಟರ್ಗೆ 182.13 ಎಕರೆ, 7ರಿಂದ 8 ಮೀಟರ್ಗೆ 477.61 ಮೀಟರ್ ಎಕರೆ ಜಮೀನು ಮುಳುಗಡೆಯಾಗಲಿದೆ. ಪ್ರಸ್ತುತ 5 ಮೀಟರ್ ನೀರು ನಿಲ್ಲಿಸಲಾಗಿದ್ದು ಮುಂದಿನ ವರ್ಷ 7 ಮೀಟರ್ ನೀರು ನಿಲ್ಲಿಸಲಾಗುವುದು. 7 ಮೀಟರ್ ನೀರು ನಿಲ್ಲಿಸಿದರೆ ಒರತೆಯನ್ನು ಅನುಸರಿಸಿ ಒಟ್ಟು 8 ಮೀಟರ್ ಮಟ್ಟದ 477.61 ಎಕರೆ ಜಮೀನಿನಲ್ಲಿ ಸರಕಾರಿ ಜಮೀನನ್ನು ಹೊರೆತು ಪಡಿಸಿ ಖಾಸಗಿ ಜಮೀನು ಒತ್ತುವರಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಶೀರ್ಘವೇ ನಿಯೋಜ ತೆರಳಲಾಗುವುದು ಎಂದು ಅವರು ಹೇಳಿದರು.
ಕಳೆದ ಎಪ್ರಿಲ್ ಅಂತ್ಯದಲ್ಲಿ ಎಎಂಆರ್ ಡ್ಯಾಂನಲ್ಲಿ 0 ಮೀಟರ್, ತುಂಬೆ ಡ್ಯಾಂನಲ್ಲಿ 1.9 ಮೀಟರ್ ನೀರಿತ್ತು. ಆದರೆ ಪ್ರಸ್ತುತ ಶಂಭೂರು ಎಎಂಆರ್ ಡ್ಯಾಂನಲ್ಲಿ 3.9 ಮೀಟರ್ ನೀರಿದ್ದು ತುಂಬೆ ವೆಟೆಂಡ್ ಡ್ಯಾಂನಲ್ಲಿ 5 ಮೀಟರ್ ನೀರಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಪ್ರತೀದಿನ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಕಳೆದ ಎರಡು ತಿಂಗಳು ರೇಷನಿಂಗ್ ಮಾಡಿದ ಕಾರಣಕ್ಕೆ ರಾಜಕೀಯ ಪ್ರೇರಿತ ಹೋರಾಟಗಳು ನಡೆದಿದೆ. ಕಳೆದ ವರ್ಷ ಜನರು ನೀರಿಗಾಗಿ ಅನುಭವಿಸಿದ ಕಷ್ಟ ಈ ಬಾರಿ ಅನುಭವಿಸಬಾರದೆಂದು ರೇಷನಿಂಗ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಋತುವಲ್ಲಿಯೂ ಮಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು
ಬಾಕ್ಸ್…
ಹೋರಾಟಗಾರರು ರೈತರಲ್ಲ: ಮನಪಾ ಆಯುಕ್ತ
ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಜಮೀನು ಮುಳುಗಡೆಯಾಗಲಿರುವ ಸಂತ್ರಸ್ಥ ರೈತರಿಗೆ ಪರಿಹಾರ ಒದಗಿಸಲು ಹೋರಾಟ ನಡೆಸುತ್ತಿರುವವರು ಯಾರೂ ರೈತರಲ್ಲಿ ಎಂದು ಮನಪಾ ಆಯುಕ್ತ ನಝೀರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳೂರಿಗೆ ನೀರಿನ ಸಮಸ್ಯೆ ತಲೆದೋರಿದಾಗ ತುಂಬೆಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಸಂತ್ರಸ್ಥ ರೈತರೊಂದಿಗೆ ಎಷ್ಟು ಸಭೆ ನಡೆಸಿದ್ದೀರಿ? ಎಷ್ಟು ಮಂದಿಗೆ ನೆಲ ಬಾಡಿಗೆ ನೀಡಿದ್ದೀರಿ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪರಿಹಾರಕ್ಕೆ ಸಂಬಂಧಿಸಿ ನಾಲ್ಕು ಸಭೆ ನಡೆಸಲಾಗಿದೆ. ಈಗಾಗಲೇ ಎಲ್ಲ ರೈತರಿಗೆ ನೆಲ ಬಾಡಿಗೆ ನೀಡಲಾಗಿದೆ. ಆದರೆ ಸಂತ್ರಸ್ಥ ರೈತರಿಗೆ ಪರಿಹಾರಕ್ಕಾಗಿ ಹೋರಾಟ ನಡೆಸುವವರು ಯಾರೂ ರೈತರಲ್ಲ. ಅವರೆಲ್ಲರೂ ಬರೀ ಹೋರಾಟಗಾರರು ಮಾತ್ರವಾಗಿದ್ದಾರೆ ಎಂದು ಹೇಳಿದರು.