ಮೂಡುಬಿದಿರೆ: ನೇತ್ರಾವತಿ ಈ ಭಾಗದ ಜನರ ಜೀವನದಿ. ನದಿತಿರುವು ಯೋಜನೆ ಮೂಲಕ ನೇತ್ರಾವತಿ ನದಿಯ ಜೊತೆಗಿನ ಯಾವುದೇ ಅಸಭ್ಯ ವರ್ತನೆಗೆ ನಾನು ಸಮ್ಮತಿ ನೀಡುವುದಿಲ್ಲ. ನೀರು ಎಲ್ಲರಿಗೂ ಬೇಕು. ಆದರೆ ನೀರಿನ ಮೂಲ ಯಾವುದು ಎಂಬ ಯೋಚನೆ ಯಾರಿಗೂ ಇಲ್ಲ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರಖಾತೆ ಸಚಿವ ಅನಿಲ್ ಮಾದವ್ ದಾವೆ ಹೇಳಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016ರ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಶ್ಚಿಮ ಘಟ್ಟ, ಹಿಮಾಲಯ ಹಾಗೂ ಈಶಾನ್ಯ ಭಾಗಗಳು ದೇಶದ ಶ್ವಾಸಕೋಶವಿದ್ದಂತೆ ಅಭಿವೃದ್ಧಿಯು ಹೆಸರಿನಲ್ಲಿ ಈ ಸಂಪನ್ಮೂಲಗಳನ್ನು ಕಳೆದುಕೊಳ್ಳುವಂತಹ ಅವಿವೇಕ ಯೋಜನೆಗಳನ್ನು ಜಾರಿಗೆ ತರುವುದಿಲ್ಲ.. ಅಭಿವೃದ್ಧಿ ಹಾಗೂ ಪರಿಸರ ಜೊತೆಯಾಗಿ ಸಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

man-1

m-6

ಪರಿಸರ ಹಾಗೂ ನೀರಿನ ಸಂರಕ್ಷಣೆ ಅತ್ಯಗತ್ಯ ಎಂದ ಅವರು, ನೋಟಿನ ಅಭಾವದಿಂದಾಗಿ ಒಂದು ದಿನ ಎಟಿಎಂ ಎದುರು ಸರತಿಸಾಲಿನಲ್ಲಿ ನಿಂತರೆ ಟೀಕಿಸುವ ಸಮಾಜಕ್ಕೆ ಭವಿಷ್ಯದಲ್ಲಿ ಕುಡಿಯಲು ನೀರೇ ಇಲ್ಲದಿದ್ದರೆ ಏನಾಗಬಹುದು? ಎಂದು ಪ್ರಶ್ನಿಸಿದ ಸಚಿವ, ಇಂದು ಬಾಟಲಿಯಲ್ಲಿ ನೀರುಹಿಡಿದು ಸಾಗುವ ನಾವು ಮುಂದೊಂದು ದಿನ ಆಮ್ಲಜನಕವನ್ನೂ ಹಿಡಿಕೊಂಡುಹೋಗುವ ಪರಿಸ್ಥಿತಿ ಉಂಟಾಗಬಹುದು ಎಂದರು. ಪರಿಸರ ಸಂರಕ್ಷಣೆ ಕುರಿತು ಕೇವಲ ಸೆಮಿನಾರ್, ಕಾರ್ಯಾಗಾರಗಳಲ್ಲಿ ಚರ್ಚೆಮಾಡುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಕೇವಲ ಚರ್ಚೆಮಾಡಿ, ಇನ್ನೊಬ್ಬರಿಗೆ ಸಲಹೆಸೂಚನೆ ನೀಡುವ ಬದಲು ನಮ್ಮ ಸುತ್ತಮುತ್ತ ಇರುವ ಕೆರೆಕೊಳ್ಳಗಳನ್ನು ನೀರಿನ ಸೆಲೆಗಳಾಗಿ ಪರಿವರ್ತಿಸುವ ಕಾರ್ಯವನ್ನು ಮಾಡಬೇಕು. ಇದಕ್ಕಾಗಿ ಬೃಹತ್‍ಯೋಜನೆಗಳನ್ನು ಅಥವಾ ಸಮಾಜಸೇವಾ ಸಂಘ ಕಟ್ಟಬೇಕಾಗಿಲ್ಲ ಎಂದರು.

m-4

ನೀರು, ಕೆರೆ, ಸರೋವರಗಳನ್ನು ಸಂರಕ್ಷಿಸಬೇಕಾದರೆ ಮೊದಲು ವೈಯುಕ್ತಿಕ ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಳ್ಳುವುದು ಅಗತ್ಯ. ತಟ್ಟೆಯಲ್ಲಿರುವ ಆಹಾರವನ್ನು ವ್ಯರ್ಥ ಮಾಡದೆ, ಕುಡಿಯುವ ನೀರನ್ನು ಜೋಪಾನವಾಗಿ ಉಪಯೋಗಿವುದೇ ನೀರಿನ ಸಂರಕ್ಷಣೆಯ ಮೊದಲಹೆಜ್ಜೆ ಎಂದರು. ಕಾರ್ಯಕ್ರಮದಲ್ಲಿ ‘ಸಹ್ಯಾದ್ರಿ ಇ ನ್ಯೂಸ್‍ನ’ ಐವತ್ತಾರು ಸಂಚಿಕೆಗಳ ಸಂಗ್ರಹ ಹಾಗೂ ಐಐಎಸ್‍ಸಿಯ ಸಂಶೋಧನಾ ವರದಿಯ ಪೋಟೋ ಮ್ಯಾಗಸೀನ್ ಅನ್ನು ಬಿಡುಗಡೆ ಮಾಡಲಾಯಿತು.

m-5

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್‍ಕುಮಾರ್ ಕಟೀಲ್, ಸಮ್ಮೇಳನಾಧ್ಯಕ್ಷ ರ ಅಧ್ಯಕ್ಷ ಡಾ.ಟಿ.ವಿ.ರಾಮಚಂದ್ರ. ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ. ಎಂ.ಡಿ.ಸುಭಾಷ್‍ಚಂದ್ರ, ಡಾ.ಹರೀಶ್‍ಭಟ್, ಲೇಕ್ 2016ರ ಸಂಯೋಜಕ ಡಾ.ರಾಜೇಶ್ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿ, ಪ್ರೊ.ದೀಪಾ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.

m-3

ನದಿತಿರುವು ಯೋಜನೆಗೆ ಸಮ್ಮತಿ ಇಲ್ಲ…
ನೇತ್ರಾವತಿ ನದಿ ಕರಾವಳಿ ಜನರ ಭಾವನಾತ್ಮಕವಾಗಿ ಬೆರೆತುಕೊಂಡಿದೆ. ಈ ನದಿಯ ಜೊತೆ ಯಾವುದೆ ಅನ್ಯಾಯ ಆಗುವುದನ್ನು ಬಿಡುವುದಿಲ್ಲ ಎಂಬ ಆಶ್ವಾಸನೆ ನೀಡುತ್ತೇನೆ. ಈ ಯೋಜನೆ ಬಗ್ಗೆ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂದಿದೆ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರಖಾತೆ ಸಚಿವ ಅನಿಲ್ ಮಾದವ್ ದಾವೆ ಎಂದು ಪತ್ರಕರ್ತರಿಗೆ ತಿಳಿಸಿದರು. ಲೇಕ್‍ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ನದಿತಿರುವು ಯೋಜನೆಗೆ ಸಂಬಂಧಿಸಿ 5000 ಮರಗಳನ್ನು ಕಡಿಯುವ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ಮರ ಕಡಿಯುವುದಕ್ಕೆ ಕೇಂದ್ರಸರ್ಕಾರದಿಂದ ಯಾವುದೇ ಅನುಮತಿ ನೀಡಿಲ್ಲ. ಈ ಪ್ರಕರಣ ರಾಷ್ಟ್ರೀಯ ಹಸಿರುಪೀಠದಲ್ಲಿರುವ ಕಾರಣ ಈ ಬಗ್ಗೆ ಮಾತನಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.

By suddi9

Leave a Reply

Your email address will not be published. Required fields are marked *