ಬಂಟ್ವಾಳ: ತಾಲ್ಲೂಕಿನಲ್ಲಿ ಹರಿದು ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯಿಂದ ಕೃಷಿ ಚಟುವಟಿಕೆಗೆ ಮುಂಬರುವ ಜನವರಿ ತಿಂಗಳಿನ ಬಳಿಕ ನೀರು ಮೇಲೆತ್ತುವುದನ್ನು ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಜಗದೀಶ್ ಅವರು ನೀಡಿರುವ ಹೇಳಿಕೆಯನ್ನು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮೂರು ಬಾರಿ ಇಂತಹ ಆದೇಶ ಜಾರಿಗೊಂಡಾಗ ನದಿ ನೀರನ್ನೇ ನಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇಲ್ಲಿನ ರೈತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕಳೆದ 1993ರಲ್ಲಿ ಕೂಡಾ ಕೃಷಿ ಪಂಪು ಸೆಟ್ಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದ ಅಂದಿನ ಜಿಲ್ಲಾಧಿಕಾರಿ ವಿರುದ್ಧ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಜಿಲ್ಲೆಯ ಬಹುತೇಕ ಕಂಪೆನಿಗಳಿಗೆ ಯತೇಚ್ಛ ನೀರು ಪೂರೈಸಲಾಗುತ್ತಿದ್ದರೂ ಕೃಷಿ ಚಟುವಟಿಕೆಗೆ ಮಾತ್ರ ಡ್ಡಿಪಡಿಸುತ್ತಿರುವುದು ಕೃಷಿಕರನ್ನು ಮುಗಿಸಿ ಕಂಪೆನಿ ರಕ್ಷಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ್ದಾರೆ.

