ಮಂಗಳೂರು: ಜನಸಂಪರ್ಕ ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರೊಬ್ಬರ ಮಾತಿಗೆ ಶಾಸಕ ಅಭಯ್ ಚಂದ್ರ ಜೈನ್ ಕೆಂಡಮಂಡಲವಾದ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ. ಮುಲ್ಕಿಯ ಬಿಲ್ಲರ ಭವನ ಸಂಘದಲ್ಲಿ ಗ್ರಾಮಗಳ ಜನಸಂಪರ್ಕ ಸಭೆ ನ.8ರಂದು ನಡೆದಿತ್ತು. ಇದೇ ಸಂದರ್ಭ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನದಟ್ಟು ಮಾಡುತ್ತಿದ್ದರು.
ಈ ಸಂದರ್ಭ ಗ್ರಾಮಸ್ಥ ಹಾಗೂ ಕೆ ಎಫ್ ಡಿ ಸದಸ್ಯ ಶರೀಫ್ ಕೊಲ್ನಾಡು ಎಂಬವರು ವೇದಿಕೆಗೆ ಹೋಗಿ ಮುಲ್ಕಿ ಸರಕಾರಿ ಆಸ್ಪತ್ರೆಯ ಹಾಗೂ ಇಲ್ಲಿನ ಡಿ ಗ್ರೂಪ್ ನೌಕರರ ಕೊರತೆ ಬಗ್ಗೆ ವಿವರಿಸುತ್ತಾ ಸರಕಾರದಲ್ಲಿ ಹಣವಿಲ್ಲವೇ ಎಂಬ ಮಾತುಗಳನ್ನಾಡಿ ವೇದಿಕೆಯಿಂದ ಕೆಳಗಿಳಿದರು. ಕೂಡಲೇ ಕೆಂಡಮಂಡಲವಾದ ಶಾಸಕ ಅಭಯಚಂದ್ರ ಜೈನ್ ಮೇರು ಧ್ವನಿಯಲ್ಲಿ ಸರ್ಕಾರದಲ್ಲಿ ಹಣ ಇದೆಯೇ ಇಲ್ಲವೇ ಎಂದು ಇನ್ನೊಂದು ವೇದಿಕೆಯಲ್ಲಿ ಮಾತಾಡೋಣವೆಂದು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶರೀಫ್ ಮಧ್ಯೆ ಮಾತಿನ ಚಕಾಮಕಿ ನಡೆಯಿತು. ಶರೀಫ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸಭೆಯಿಂದ ಹೊರದೂಡಿದರು. ಶಾಸಕನಾಗಿ ಅಭಯಚಂದ್ರ ಜೈನ್ ಈ ರೀತಿ ಕೀಳು ಮಟ್ಟದಲ್ಲಿ ಶರೀಫ್ ಅವರಿಗೆ ಬೈದಿದ್ದು ಈಗ ಸ್ಥಳಿಯವಾಗಿ ವ್ಯಾಪಕ ಚರ್ಚೆಗೆ ಗುರಿಯಾಗಿದ್ದಾರೆ.

