ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ. ಡಾ.ವಿಷ್ಣು ಅಪ್ಪಟ ಅಭಿಮಾನಿಯಾಗಿದ್ದ ರಾಜು ನಿನ್ನೆ ನಾಗರಹಾವು ಸಿನಿಮಾವನ್ನ ಮಾರ್ನಿಂಗ್ ಶೋ ನಲ್ಲಿ ನೋಡಿದ್ದಾನೆ. ಆದನ್ನ ಮತ್ತೆ ನೋಡಲು ನಗರದ ಸ್ವಾಗತ್ ಗರುಡಾ ಮಾಲ್ಗೆ ಮಧ್ಯಾಹ್ನ ಶೋಗೆ ತೆರಳಿದ್ದ.
ಸಿನಿಮಾದ ಇಂಟರ್ವಲ್ ಅವಧಿ ಮುಗಿದ ನಂತರ ವಿಷ್ಣು ಆಗಮನದ ಸಮಯದಲ್ಲಿ ಅತಿಯಾದ ಭಾವೋದ್ವೇಗಕ್ಕೆ ಒಳಗಾಗಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ವಿಷಯ ತಿಳಿದ ಕೂಡಲೇ ಮೃತರ ಮನೆಗೆ ಭೇಟಿ ನೀಡಿದ ನಟ ಅನಿರುದ್ಧ್, ಕುಟುಂಬದವರಿಗೆ ಸಾಂತ್ವನ ಹೇಳಿದ್ರು.

ಬಾಲ್ಯದಿಂದಲೂ ಅಭಿಮಾನಿ: ಈತ ಯಾವ ಪರಿ ವಿಷ್ಣು ಅಭಿಮಾನಿ ಅಂದ್ರೆ ಚಿಕ್ಕಂದಿನಿಂದಲೂ ವಿಷ್ಣು ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತಿದ್ದನಂತೆ. ಅಭಿಮಾನ ಯಾವ ಹಂತಕ್ಕೆ ತಲುಪಿತ್ತು ಅಂದ್ರೆ ವಿಷ್ಣುವರ್ಧನ್ ಮನೆ ಮುಂದೆ ಆಗಾಗ ಹೋಗಿ ಬರುವ ಗೀಳನ್ನು ಈತ ಬೆಳಸಿಕೊಂಡಿದ್ದ. ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ ನಂತರ ಕೂಡ ಈತ ವಿಷ್ಣುವರ್ಧನ್ ಮನೆ ಮುಂದೆ ಹೋಗಿ ಸಿಗರೇಟು ಸೇದಿಕೊಂಡು ಬರುವ ಅಭ್ಯಾಸವನ್ನು ಇಟ್ಟುಕೊಂಡಿದ್ದನಂತೆ. ಈ ಬಗ್ಗೆ ಸ್ನೇಹಿತರು ಯಾಕೆ ಹೀಗೆ ಮಾಡುತ್ತೀಯಾ ಅಂತಾ ಕೇಳಿದ್ರೆ ಅವರ ಮನೆ ನೋಡಿದ್ರೆ ವಿಷ್ಣುವರ್ಧನ್ ಅವರನ್ನೇ ನೋಡಿದಂತಾಗುತ್ತೆ. ಅವರ ಮನೆಯ ಗೇಟನ್ನು ನೋಡಲು ಏನೋ ಒಂಥರಾ ಸಮಾಧಾನ ಅಂತಾ ಹೇಳುತ್ತಿದ್ದ ಎಂದು ಸ್ನೇಹಿತರು ಹೇಳುತ್ತಾರೆ.

ಗೆಳೆಯರ ಜೊತೆ ವಿಷ್ಣು ಅಭಿಮಾನಿ ಸುಬ್ರಮಣಿ
ರಾಜುವಿನ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ತನ್ನ ಮನೆಯ ಆಧಾರ ಸ್ತಂಭವಾಗಿದ್ದ. ಈಗ ಆತನ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ. ಅದೇನೇ ಇದ್ರು ಹುಚ್ಚು ಅಭಿಮಾನದಿಂದ ಈ ಸಾವು ಬಂತು ಎನ್ನಲಾಗುತ್ತಿರುವುದು ನಿಜಕ್ಕೂ ವಿಪರ್ಯಾಸ.
ಕೃಪೆ: ಪಬ್ಲಿಕ್ ಟಿವಿ

