ಬಂಟ್ವಾಳ:ವಿದ್ಯಾರ್ಥಿಗಳು ತಾನು ಬಡವನೆಂಬ ಮನೋಭಾವವನ್ನು ಬಿಟ್ಟುಬಿಡಬೇಕು, ನಮಲ್ಲಿರುವ ಕಣ್ಣು, ಕಿವಿ, ಮೆದುಳು, ಬಾಯಿ ಇವುಗಳೇ ನಮ್ಮನ್ನೆಲ್ಲಾ ಶ್ರೀಮಂತಗೊಳಿಸುವ ಆಸ್ತಿ ಎಂದು ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು. ಯುನೈಟೈಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಮಂಗಳೂರು ಇದರ ಸಿದ್ದಕಟ್ಟೆ ಘಟಕದ ವತಿಯಿಂದ ಭಾನುವಾರ ಮದ್ಯಾಹ್ನ ರಾಯಿಯ ಲೋಬೋ ಕಾಂಪ್ಲೆಕ್ಸ್ ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ತಾವು ಪಡೆದ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡೆದುಕೊಳ್ಳಬೇಕು, ಅವಕಾಶಗಳನ್ನು ಬಳಸಿಕೊಂಡು ಉನ್ನತ ವಿದ್ಯಾಭ್ಯಾಸ ಗಳಿಸಿ ಸಮಾಜಕ್ಕೆ ಆಸ್ತಿಯಾಗಬೇಕೆಂದರು. ಬಂಟ್ವಾಳ ವಿಜಯ ಬ್ಯಾಂಕ್ ನ ಪ್ರಬಂಧಕ ಬೇಬಿ ಕುಂದರ್ ಮಾತನಾಡಿ, ಬ್ಯಾಂಕ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತು ಹಾಗೂ ಸಾಲ ಸೌಲಭ್ಯಗಳ ಬಗ್ಗೆ ವಿವರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕೇಂದ್ರೀಯ ಸಮಿತಿ ಅಧ್ಯಕ್ಷ ಆಲ್ಬನ್ ಮಿನೇಜಸ್ ವಹಿಸಿದ್ದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಮಿಲಾಗ್ರೀಸ್ ಕೊ. ಬ್ಯಾಂಕ್ ನ ಪ್ರಬಂಧಕ ಮೊಹಮ್ಮದ್ ಇಕ್ಬಾಲ್ ಶೇಖ್ ಶುಭ ಹಾರೈಸಿದರು. ಉದ್ಯಮಿ ಅವಿಲ್ ಮಿನೇಜಸ್, ಮಮತಾ ರಿಬೆಲ್ಲೋ, ಬೆನೆಡಿಕ್ಟ್ ಫೆರ್ನಾಂಡೀಸ್, ಜೋರ್ಜ್ ಕ್ರಾಸ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಪಾವ್ಲ್ ಲೋಬೋ ಸ್ವಾಗತಿಸಿದರು. ಜೋಕಿಂ ಪಿಂಟೋ ವಂದಿಸಿದರು. ಆ್ಯಂಟನಿ ಡಿ’ಸೋಜ್ ಘಟಕದ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು.
ಮೆಲ್ವಿನ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಸರ್ವಧರ್ಮದ 125 ಮಕ್ಕಳಿಗೆ ಸುಮಾರು 7 ಲಕ್ಷ ರೂ ವೆಚ್ಚದ ವಿದ್ಯಾರ್ಥಿವೇತನದ ಚೆಕ್ ವಿತರಿಸಲಾಯಿತು.
