ಮಂಡ್ಯ: ಸಿದ್ದರಾಮಯ್ಯ ಅವರ ಸಂಪುಟ ಪುನರ್ ರಚನೆ ಸಂಕಟ ಸರಕಾರಕ್ಕೆ ಸಂಕಟ ತಂದಿದ್ದು, ಮೊದಲ ವಿಕೆಟ್ ಪತನಗೊಂಡಿದೆ. ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸತ್ತ ಅಂಬರೀಷ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಂಬಿ ತಮ್ಮ ಆಪ್ತ ಸಹಾಯಕ ಶ್ರೀನಿವಾಸ್ ಮೂಲಕ ವಿಧಾನಸಭಾ ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಆದರೆ ರಾಜೀನಾಮೆ ಪತ್ರ ಸ್ವೀಕರಿಸಲು ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ ನಿರಾಕರಿಸಿದ್ದಾರೆ.

ಶಾಸಕರೇ ಖುದ್ದು ಆಗಮಿಸಿ ರಾಜೀನಾಮೆ ನೀಡಬೇಕು, ರಾಜೀನಾಮೆಗೆ ಸರಿಯಾದ ಕಾರಣ ಕೊಡಬೇಕು, ಆಪ್ತ ಸಹಾಯಕರ ಮೂಲಕ ಕಳುಹಿಸಿದರೆ ಅದು ಅಂಗೀಕರಿಸಲು ಆಗುವುದಿಲ್ಲ ಎಂದು ಅಂಬಿ ಆಪ್ತ ಸಹಾಯಕ ಶ್ರೀನಿವಾಸ್ಗೆ ಸೂಚನೆ ನೀಡಿದ್ದಾರೆ. ಮಂಡ್ಯ ವಿಧಾನಸಭಾ ಶಾಸಕನಾಗಿರುವ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೇ ಬರೆದಿರುವ ಅಂಬಿ ಅವರು ತಮ್ಮ ರಾಜೀನಾಮೆಗೆ ನಿಖರ ಕಾರಣವನ್ನು ನೀಡಿಲ್ಲ.
ಸಚಿವ ಸ್ಥಾನದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದ ಅಂಬರೀಷ್, ಸಂಪುಟದಿಂದ ಕೈಬಿಡುವ ಬಗ್ಗೆ ಕನಿಷ್ಟ ಸೌಜನ್ಯಕ್ಕೆ ತಿಳಿಸಬೇಕಿತ್ತು. ಹೀಗಾಗಿ ನಾನು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಮನಸ್ಸು ಒಪ್ಪುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ. ಅಂಬರೀಶ್ ಅವರನ್ನು ಮನವೊಲಿಸುವ ಸಾಧ್ಯತೆ ಇದೆ.
