ಬಂಟ್ವಾಳ: ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ಹತ್ತು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಶನಿವಾರ ಸಮಾಪನಗೊಂಡಿತು.

ತಾಲೂಕು ಪಂಚಾಯತು ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಒಲವು ಮೂಡಿಸುವಲ್ಲಿ ಇಂತಹ ಶಿಬಿರಗಳು ಮಹತ್ತರ ಪಾತ್ರ ವಹಿಸುತ್ತದೆ. ಮಕ್ಕಳು ಇಲ್ಲಿ ಕಲಿತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದರು.
ತಾಲೂಕು ಪಂಚಾಯತು ಉಪಾಧ್ಯಕ್ಷ ಆನಂದ ಎ.ಶಂಭೂರು ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿದರು. ಮಕ್ಕಳಲ್ಲಿ ಕ್ರಿಯಾಶೀಲತೆ, ಸೃಜನಾಶೀಲತೆಯನ್ನು ಬೆಳೆಸಿ ಮಕ್ಕಳು ಕಲಿಕೆಯೊಂದಿಗೆ ಹೊಸ ಸಾಧ್ಯತೆಗಳನ್ನು ಗುರುತಿಸಿ ಮುನ್ನಡೆಯಲು ಇಂತಹ ಪಠ್ಯೇತರ ಶಿಬಿರಗಳು ಪೂರಕವಾಗಿದೆ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ, ಬಾಲ ವಿಕಾಸ ಅಕಾಡೆಮಿ ಸದಸ್ಯ ಮೌನೇಶ್ ವಿಶ್ವಕರ್ಮ, ಯಕ್ಷಲೋಕ ನಿರ್ಧೇಶಕ ಗೋಪಾಲ ಅಂಚನ್ ಅತಿಥಿಗಳಾಗಿ ಬಾಗವಹಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸ್ವಾಗತಿಸಿದರು. ಮೇಳ್ವಿಚಾರಕಿ ಗಾಯತ್ರಿ ಕಂಬಳಿ ವಂದಿಸಿದರು. ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಗೆ ಹತ್ತು ದಿನಗಳಲ್ಲಿ ವ್ಯಕ್ತಿತ್ವ ವಿಕಸನ, ರಂಗ ಕಲೆ, ಸಂಗೀತ, ಚಿತ್ರಕಲೆ, ಮುಖವಾಡ ತಯಾರಿ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಯಿತು.
