ಬಂಟ್ವಾಳ: ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳ ಸಮೀಪದ ಕಾವಳಕಟ್ಟೆಯ ನಿವಾಸಿಗಳಾದ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಆಲ್ಟೋ ಕಾರಿಗೆ ಲಾರಿ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಜಯಕೀರ್ತಿ ಇಂದ್ರ(50),ಅವರ ಪತ್ನಿ ವಾಗೇಶ್ವರಿ(48), ಪುತ್ರ ಪ್ರಶಾಂತ್(30) ಮೃತಪಟ್ಟ ದುರ್ದೇವಿಗಳು.

ಅವರು ಬೆಂಗಳೂರಿನಿಂದ ತಮ್ಮ ಕಾರಿನಲ್ಲಿ ಬಂಟ್ವಾಳದ ಕಾವಳಕಟ್ಟೆಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಯೊಂದು ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಬಡಿದಿದೆ. ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡು ಮೂವರೂ ಕೂಡ ಕಾರಿನಲ್ಲಿಯೇ ಸಿಲುಕಿ ತೀವ್ರಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೂಲತಃ ಕಾವಳಕಟ್ಟೆ ನಿವಾಸಿಗಳಾಗಿರುವ ಇವರು ಕಳೆದ 8 ವರ್ಷಗಳಿಂದ ಬೆಂಗಳೂರಿನ ಕುಮಾರಪಾಳ್ಯದಲ್ಲಿ ವಾಸ್ತವ್ಯವಿದ್ದಾರೆ. ಜಯಕೀರ್ತಿ ಅವರ ಮಗ ಪ್ರಶಾಂತ್ ಅವರು ಜನರಲ್ ಇನ್ಸೂರೆನ್ಸ್ ಕಂಪೆನಿಯೊಂದರಲ್ಲಿ ಕ್ಲೈಮ್ಸ್ ಮೆನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ನಿಯ ಸಂಬಂಕರ ವಿವಾಹದ ಕಾರ್ಯಕ್ರಮದ ಆರತಕ್ಷತೆ ಸಮಾರಂಭ ಮಂಗಳೂರಿನಲ್ಲಿ ಶುಕ್ರವಾರ ನಡೆಯಲಿದ್ದು ಈ ಪ್ರಯುಕ್ತ ಕುಟುಂಬ ಸಮೇತವಾಗಿ ಮಂಗಳೂರಿಗೆ ಬರುತ್ತಿದ್ದರು. ಜಯಕೀರ್ತಿ ಇಂದ್ರ ಅವರಿಗೆ ಮೂವರು ಮಕ್ಕಳಿದ್ದು ಈ ಪೈಕಿ ಪ್ರಶಾಂತ್ ಹಿರಿಯವನಾಗಿದ್ದು ಇನ್ನೋರ್ವ ಬೆಂಗಳೂರಿನಲ್ಲಿಯೇ ತನ್ನ ಕೆಲಸದಲ್ಲಿ ನಿರತರಾಗಿದ್ದಾರೆ. ಪುತ್ರಿಗೆ ವಿವಾಹ ಮಾಡಿಕೊಡಲಾಗಿದೆ. ಮೂರು ದಿನಗಳ ಹಿಂದೆ ಹರಿಹರದಲ್ಲಿ ವಿವಾಹ ಸಮಾರಂಭ ನಡೆದಿದ್ದು ಪ್ರಶಾಂತ್ ಅವರ ಪತ್ನಿ ಸುಶ್ಮಿತ ಅವರು ಮೂಡಬಿದಿರೆಯಲ್ಲಿರುವ ತನ್ನ ತವರು ಮನೆಯಲ್ಲಿ ಉಳಿದಿದ್ದರು. ಆರತಕ್ಷತೆ ಕಾರ್ಯಕ್ರಮದ ಬಳಿಕ ತಮ್ಮ ಸೊಸೆಯನ್ನು ಕೂಡ ಜೊತೆಯಾಗಿ ಕರೆದುಕೊಂಡು ಹೋಗುವವರಿದ್ದರು. ದುರದೃಷ್ಟವಶಾತ್ ಈ ಮೂವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕಾವಳಕಟ್ಟೆ ಪರಿಸರದಲ್ಲಿ ಈ ಹಿಂದೆ ಗೋಲಿ ಸೋಡ ತಯಾರಿಯಲ್ಲಿ ಜಯಕೀರ್ತಿ ಅವರು ಹೆಸರುವಾಸಿಯಾಗಿದ್ದರು. ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಸಹೋದರ ಪ್ರದೀಪ್ ಅವರು ಸ್ಥಳಕ್ಕೆ ತೆರಳಿ ಮುಂದಿನ ಕಾರ್ಯ ಕೈಗೊಂಡರು. ಚೆನ್ನರಾಯಪಟ್ಟಣ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡರು. ಚೆನ್ನರಾಯಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೊತ್ತರ ಪರೀಕ್ಷೆ ನಡೆಸಿ ಬಳಿಕ ಸಂಬಂಕರಿಗೆ ಹಸ್ತಾಂತರಿಸಲಾಗಿದೆ. ಮೃತರ ಅಂತಿಮ ಕ್ರಿಯೆಯು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಿಜಿಲ ಎಂಬಲ್ಲಿರುವ ಜಯಕೀರ್ತಿ ಅವರ ತವರು ಮನೆಯಲ್ಲಿ ಶುಕ್ರವಾರ ಸಂಜೆ ನಡೆಯಿತು.



