ಮೂಡುಬಿದಿರೆ: ಹಿಂದೂ ವಿದ್ಯಾದಾಯಿನಿ ಸಂಘ,ಸುರತ್ಕಲ್ ಹಾಗೂ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಅಭಿನಯಿಸಿದ ದೂತವಾಕ್ಯ ನಾಟಕವು ಪ್ರಥಮ ಪ್ರಶಸ್ತಿಯ ಪಡೆಯುವುದರೊಂದಿಗೆ ಅತ್ಯುತ್ತಮ ನಾಟಕವಾಗಿ ಮೂಡಿಬಂದಿದೆ. ಈ ಸ್ಪರ್ಧೆಯಲ್ಲಿ ಒಟ್ಟು ಐದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಮೂಲ ಸಂಸ್ಕೃತ ನಾಟಕಕಾರ ಭಾಸ ಕವಿ ವಿರಚಿತ,ಡಾ.ಕೆ.ಕೃಷ್ಣಮೂರ್ತಿ ಅನುವಾದಿಸಿದ, ಜೀವನ್ ರಾಂ ಸುಳ್ಯ ನಿರ್ದೇಶನದ ದೂತವಾಕ್ಯ ನಾಟಕಕ್ಕೆ ಅತ್ಯುತ್ತಮ ಸಂಗೀತ ಪ್ರಥಮ,,ಅತ್ಯುತ್ತಮ ರಂಗ ಸಜ್ಜಿಕೆ ಪ್ರಥಮ,ಅತ್ಯುತ್ತಮ ನಟ ಪ್ರಥಮ,ಅತ್ಯುತ್ತಮ ಪೋಷಕ ನಟ ಪ್ರಥಮ ಬಹುಮಾನಗಳು ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಅದ್ಭುತ ಅಭಿನಯ,ಸ್ಪಷ್ಟ ಉಚ್ಛಾರಣೆಯ ಮಾತುಗಾರಿಕೆ,ವಿದ್ಯಾರ್ಥಿಗಳೇ ನಿರ್ವಹಿಸಿದ ಸಂಗೀತ ಸಾಂಗತ್ಯ,ಕಲಾತ್ಮಕ ರಂಗ ಸಜ್ಜಿಕೆ,ವಸ್ರ್ತವಿನ್ಯಾಸ,ಪ್ರಸಾಧನ,ಬೆಳಕು ಸಂಯೋಜನೆ ಎಲ್ಲದರಲ್ಲೂ ವಿಶೇಷತೆಯನ್ನು ಕಂಡ ಈ ನಾಟಕ ನಿರ್ಣಾಯಕರು ಸೇರಿದಂತೆ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಫೆ.27 ರಂದು ಸುರತ್ಕಲ್ ನಲ್ಲಿ ನಡೆಯಲಿರುವ ಶತಮಾನೋತ್ಸವ ಸರಣಿ ಸಮಾರಂಭದಲ್ಲಿ ಹತ್ತು ಸಾವಿರ ನಗದು ಬಹುಮಾನದೊಂದಿಗೆ ಆಳ್ವಾಸ್ ಈ ಪ್ರಶಸ್ತಿಯನ್ನು ಪಡೆಯಲಿದೆ.
