ಬಂಟ್ವಾಳ: ಇಲ್ಲಿನ ಪುರಸಭೆಯು ದುರಾಡಳಿತದಿಂದ ಕೂಡಿದೆ ಎಂದು ಆರೋಪಿಸಿ ಬಂಟ್ವಾಳ ತಾಲ್ಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಸದಸ್ಯ ಪ್ರಭಾಕರ ದೈವಗುಡ್ಡೆ ಅವರು ಏಕಾಂಗಿಯಾಗಿ ಬುಧವಾರ ಧರಣಿ ಆರಂಭಿಸಿದರು.
ಬುಧವಾರ ಬೆಳಿಗ್ಗೆ ಪುರಸಭೆ ಕಛೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಕುಳಿತ ಅವರು ಸಮರ್ಪಕ ನ್ಯಾಯ ಸಿಗದೆ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಪುರಸಭೆಗೆ ಇಲ್ಲಿನ ನಾಗರಿಕರು ವಿವಿಧ ಸಮಸ್ಯೆಗಳ ಬಗ್ಗೆ ದೂರು ಮತ್ತು ಕೆಲವೊಂದು ಸೌಲಭ್ಯಗಳಿಗೆ ನೀಡುವ ಅರ್ಜಿ ಬಗ್ಗೆ ಇಲ್ಲಿನ ಪಂಪ್ ಆಪರೇಟರ್ ಮಂಜಪ್ಪ ಎಂಬವರು ಅರ್ಜಿಗಳನ್ನು ತಡೆ ಹಿಡಿಯುತ್ತಿದ್ದಾರೆ. ಇನ್ನೊಂದಡೆ ಯೋಜನಾ ಅಭಿವೃದ್ಧಿ ಪ್ರಾಧಿಕಾರವು ಕೆರೆ ಅಭಿವೃದ್ಧಿ ನೆಪದಲ್ಲಿ ಒಂದು ಸೆಂಟ್ಸ್ ಜಮೀನಿಗೆ ಒಂದು ಸಾವಿರ ರುಪಾಯಿ ಹಣ ವಸೂಲಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಈ ನಡುವೆ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಮತ್ತು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅವರು ಧರಣಿ ಕುಳಿತ ಪ್ರಭಾಕರ್ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಗುರುವಾರ ಮತ್ತೆ ಧರಣಿ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
