ಬಂಟ್ವಾಳ: ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ತರ್ತು ಸಂದರ್ಭಗಳಲ್ಲಿ ವ್ಯಕ್ತಿಗೆ ಜೀವದಾನ ಮಾಡಿದಂತೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸೇವಾಂಜಲಿ ಪ್ರತಿಷ್ಠಾನ ನಡೆಸುತ್ತಿರುವ ಈ ಕಾರ್ಯ ಅಭಿನಂದನೀಯ ಹಾಗೂ ಸ್ಪೂರ್ತಿದಾಯಕ ಎಂದು ಮಂಗಳೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 77ನೇ ರಕ್ತದಾನ ಶಿಬಿರವನ್ನು ಸ್ವಯಂ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.
ಬೆಂಗಳೂರಿಗೆ ವರ್ಗಾವಣೆಗೊಳ್ಳುತ್ತಿರವ ಸಂದರ್ಭದಲ್ಲಿ ಬಂಟ್ವಾಳದಲ್ಲಿ ಕೊನೆಯ ಕಾರ್ಯಕ್ರಮವಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ. ಧಾರ್ಮಿಕ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸೇವಾಂಜಲಿ ಪ್ರತಿಷ್ಠಾನ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದೆ ಎಂದರು.
ನರಿಕೊಂಬು ನಾಗರಿಕ ಜಾಗೃತ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರೆಯ ಬ್ಲಡ್ಬ್ಯಾಂಕಿನ ಡಾ. ನವ್ಯ ವೇದಿಕೆಯಲ್ಲಿದ್ದರು. ಸುನೀಲ್ ಫೆನಾಂಡೀಸ್ ಅಬ್ಬೆಟ್ಟು, ವಿಜೇತ್ ತುಂಬೆ, ನಾರಾಯಣ ಬೆಳ್ಚಡ ಮೇರಮಜಲು, ಪದ್ಮನಾಭ ಕಿನ್ನಿಬೆಟ್ಟು, ಎಂ.ಕೆ.ಖಾದರ್, ಪ್ರಶಾಂತ್ ಕುಮಾರ್ ತುಂಬೆ, ಭಾಸ್ಕರ ಚೌಟ ಕುಮ್ಡೇಲು, ಸುಕುಮಾರ್, ಧನಂಜಯ ಅರ್ಕುಳ, ಫರಂಗಿಪೇಟೆ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಲೈಮಾನ್, ಆರ್.ಎಸ್.ಜಯ ಮತ್ತಿತರರು ಹಾಜರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ವಂದಿಸಿದರು. ಈ ಶಿಬಿರದಲ್ಲಿ ಒಟ್ಟು 61 ಯುನಿಟ್ ರಕ್ತ ಸಂಗ್ರಹಿಸಲಾಯಿತು.
