ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ನಡೆದ 12ನೇ ವರ್ಷದ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2015 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ (ಸಾಹಿತ್ಯ , ಪ್ರವಚನ) ಡಾ. ಸುಮತೀಂದ್ರ ನಾಡಿಗ (ಸಾಹಿತ್ಯ), ಎಸ್.ವಿ. ರಾಜೇಂದ್ರ ಸಿಂಗ್ ಬಾಬು(ಚಲನಚಿತ್ರ), ವಿದ್ವಾನ್ ಶ್ರೀ ಆರ್.ಕೆ ಪದ್ಮನಾಭ (ಶಾಸ್ತ್ರೀಯ ಸಂಗೀತ), ಡಾ.ಬಿ.ಎನ್. ಸುಮಿತ್ರಾ ಬಾಯಿ (ಸಾಹಿತ್ಯ), ಈಶ್ವರ ದೈತೋಟ(ಮಾಧ್ಯಮ), ಲೀಲಾವತಿ ಬೈಪಾಡಿತ್ತಾಯ (ಯಕ್ಷಗಾನ ಭಾಗವತಿಕೆ), ವರ್ತೂರು ನಾರಾಯಣ ರೆಡ್ಡಿ (ಕೃಷಿ), ಶಿಲ್ಪಿ ಹೊನ್ನಪ್ಪಾಚಾರ್ (ಶಿಲ್ಪ ಕಲೆ) ಹಾಗೂ ಸೈಯದ್ ಸಲ್ಲಾವಿದ್ದೀನ್ ಪಾಷಾ ಅವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಡಾ ಟಿ.ವಿ ವೆಂಕಟಾಚಲ ಶಾಸ್ತ್ರೀ ಅಧ್ಯಕ್ಷತೆಯನ್ನು ವಹಿಸಿ ಸಮ್ಮೇಳನದ ಸಾರ್ಥಕತೆ ಬಗ್ಗೆ ಮಾತನಾಡುದರು. ರಾಜ್ಯ ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಟ್ರಸ್ಟಿಜಯಶ್ರೀ ಅಮರನಾಥ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನುಡಿಸಿರಿಯ ರೂವಾರಿ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು.
ಆಳ್ವಾಸ್ನಲ್ಲಿ ಚಲನಚಿತ್ರ ಕೋರ್ಸ್: ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸಲಹೆ
ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ತನ್ನ ಜೀವಮಾನದಲ್ಲಿ ಅಚ್ಚಳಿಯದೆ ಉಳಿಯುವ ಪ್ರಶಸ್ತಿಯಿದು. ಇಂದು ಎಲ್ಲಾ ಕಡೆಯಲ್ಲೂ ನಾಡು-ನುಡಿಯ ಸಂಸ್ಕ್ರತಿ ಕೇವಲ ಓದಿನಲ್ಲಿ ಮತ್ತು ಬಾಯಿ ಮಾತಿನಲ್ಲಿ ಮಾತ್ರ ಉಳಿಯುತ್ತಿದೆಯಲ್ಲದೆ ಸಿನಿಮಾ ಕ್ಷೇತ್ರದಿಂದಲೂ ದೂರವಾಗುತ್ತಿದೆ. ಆದರೆ ಆಳ್ವಾಸ್ ಸಂಸ್ಥೆಯು ಶಿಕ್ಷಣ ಸಂಸ್ಥೆಯು ನೆಲ-ಜಲ, ಕನ್ನಡ ಭಾಷೆ-ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ತರಬೇತಿ ವಿಭಾಗವನ್ನು ತೆರೆಯುವಂತೆ ಸಲಹೆ ನೀಡಿದರು.


