ಮೂಡುಬಿದಿರೆ:ನೇತ್ರಾವತಿ ಬರಿದಾಗಿ, ಈ ಭಾಗದ ಜನರಿಗೆ ತೊಂದರೆ ಅಗುವುದಾದದರೆ ಎತ್ತಿನಹೊಳೆ ಯೋಜನೆ ಅನುಷ್ಠಾನ ಬೇಡ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು.

ಅಖಿಲ ಭಾರತ ಕಾರ್ಮಿಕ ಸಂಘ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಇಲ್ಲಿನ ಬಸ್ನಿಲ್ದಾಣದಲ್ಲಿ ನಡೆದ ಎತ್ತಿನ ಹೊಳೆ ಯೋಜನೆ ವಿರೋಧಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದಕ್ಕು ಮೊದಲು ಧರ್ಮಸ್ಥಳದಿಂದ ವಾಹನದಲ್ಲಿ ತಂದ ನೇತ್ರಾವತಿ ನೀರಿದ್ದ ಮಣ್ಣಿನ ಮಡಿಕೆಯನ್ನು ಅಮರನಾಥ ಶೆಟ್ಟಿ ವಾಹನದಿಂದ ಕೆಳಗಳಿಸಿದರು. ಬಳಿಕ ಅತಿಥಿಗಳು ಬೆಲ್ಲದೊಂದಿಗೆ ನೇತ್ರಾವತಿ ನೀರನ್ನು ಕುಡಿಯುವ ಮೂಲಕ ಜಿಲ್ಲೆಯ ನೀರು ನಮಗೆ ಬೇಕು ಎಂಬ ಸಂದೇಶ ನೀಡಿದರು. ನೇತ್ರಾವತಿ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಜಿ ಹೆಗಡೆ ಮಾತನಾಡಿ ನದಿಗಳು ಬತ್ತಿದರೆ ಅಲ್ಲಿನ ಜನಾಂಗವು ನಾಶವಾಗುತ್ತದೆ ಎನ್ನುವುದಕ್ಕೆ ಸರಸ್ವತಿ ಮತ್ತು ಸಿಂಧೂ ನದಿಗಳೆ ಸಾಕ್ಷಿ. ನೇತ್ರಾವತಿ ಬರಿದಾದರೆ ಜಿಲ್ಲೆಯಲ್ಲು ಅದೇ ಪರಿಸ್ಥಿತಿ ನಿರ್ಮಾಣವಾಗಬಹದು. ಎತ್ತಿನಹೊಳೆ ಯೋಜನೆಯ ಲಾಭದ ದುಡ್ಡಿನ ಬಡ್ಡಿಯಲ್ಲಿ ಕೋಲಾರಕ್ಕೆ ಟ್ಯಾಂಕರ್ನಲ್ಲಿ ನೀರು ಪೂರೈಸಬಹುದು. ಎತ್ತಿನಹೊಳೆ ದುಡ್ಡು ಮಾಡುವ ಯೋಜನೆ ಎಂದವರು ಟೀಕಿಸಿದರು.
ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ಬರಗಾಲ ಎದುರಾಗುವ ಸಾಧ್ಯತೆಯಿರುವಾಗ ನೇತ್ರವಾತಿಯನ್ನು ತಿರುಗಿಸುವ ಸರಕಾರದ ಯೋಜನೆ ತುಳುನಾಡನ್ನು ನಾಶ ಮಾಡುವ ಹುನ್ನಾರವಾಗಿದೆ. ಇದರ ವಿರುದ್ಧ ಎಲ್ಲರು ಹೋರಾಡಬೇಕು ಎಂದರು.ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
