ಕೈಕಂಬ: ವಾಟ್ಸ್ಯಾಪ್ನಿಂದ ಯುವಜನತೆ ಹಾಳಾಗಿದೆ, ಸುಮ್ಸುಮ್ನೆ ಟೈಂಪಾಸ್ ಮಾಡುತ್ತಾ ಜೀವನದ ಅಮೂಲ್ಯ ಸಮಯಗಳನ್ನು ಹಾಳು ಮಾಡುತ್ತಾರೆ. ಇದರಿಂದಾಗಿ ಸಮಾಜಕ್ಕೆ ಕೆಡುಕುಂಟಾಗುತ್ತದೆ ಎಂದು ಜರೆಯುವವರೇ ಹೆಚ್ಚು. ಆದರೆ ಈ ವಾಟ್ಸ್ಯಾಪ್ ಗ್ರೂಪ್ ಮಾತ್ರ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಾಟ್ಸ್ಯಾಪ್ನಿಂದ ಉತ್ತಮ ಕಾರ್ಯಗಳನ್ನು ನೆರವೇರಿಸಲು ಸಾಧ್ಯ ಎಂಬುವುದನ್ನು ಜಗತ್ತಿಗೆ ಸಾರಿದೆ.


ಹೌದು ಈ ಕೈಂಕರ್ಯದಲ್ಲಿ ನಿರತವಾದ ವಾಟ್ಸ್ಯಾಪ್ ಗ್ರೂಪ್ನ ಹೆಸರು `ಹಿಂದೂ ವಾರಿಯರ್ಸ್’.
ಮಕ್ಕಳೊಂದಿಗೆ ಆಡಿ ಕುಣಿದು ನಲಿದಾಡುತ್ತಿದ್ದ ಆ ಪುಟಾಣಿ ಬಾಲಕನ ಹೆಸರು ಸಾನ್ವಿಕ್. ಬೆಳ್ತಂಗಡಿ ತಾಲೂಕಿನ ಬಳಂಜ ನಿವಾಸಿ ಸತೀಶ್ ಮತ್ತು ಹೇಮಾ ದಂಪತಿಯ ಏಕೈಕ ಕರುಳ ಕುಡಿಯಾಗಿದ್ದ ಸಾನ್ವಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ ಎಂಬ ಕಟು ಸತ್ಯವನ್ನು ಕೆಎಂಸಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಈತ ಸಂಪೂರ್ಣ ಚಿಕಿತ್ಸೆ ಪಡೆದು ಗುಣಮುಖನಾಗಲು 7ರಿಂದ 8 ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದರು.
ಕೂಲಿ ಕಾರ್ಮಿಕನಾಗಿರುವ ಬಾಲಕನ ತಂದೆ ಸತೀಶ್ ಚಿಕಿತ್ಸೆಗೆಂದು 2ರಿಂದ 3 ಲಕ್ಷ ರೂ. ಖರ್ಚು ಮಾಡಿ ಸಾಲದಲ್ಲಿ ಮುಳುಗಿದ್ದರು.
ಇದರ ಮಾಹಿತಿ ಪಡೆದ ಹಿಂದೂ ವಾರಿಯರ್ಸ್ ವಾಟ್ಸ್ಯಾಪ್ ಗ್ರೂಪ್ ಬಾಲಕನ ಚಿಕಿತ್ಸೆಗೆ ಸ್ಪಂದಿಸಲು ಮುಂದೆ ಬಂದಿತು.
ಗ್ರೂಪ್ನ ಎಲ್ಲಾ ಸದಸ್ಯರು ಹಣ ಒಟ್ಟುಗೂಡಿಸಿ 1 ಲಕ್ಷ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.28ರಂದು ಆಸ್ಪತ್ರೆಯತ್ತ ಧಾವಿಸಿದ ಗ್ರೂಪ್ ಸದಸ್ಯರು ಒಟ್ಟುಗೂಡಿಸಿದ ಹಣವನ್ನು ಗ್ರೂಪ್ ಸದಸ್ಯರ ಪ್ರಶಾಂತ್ ಉಬಾರಂಗಳ ಕೈಯಿಂದ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಗುಂಪಿನ ಸದಸ್ಯರಾದ ಶಿವು ಪುತ್ತೂರು, ಉಮೇಶ್ ಹೆಬ್ರಿ, ಕಿರಣ್ ರೈ ಬಳಂಜ, ಸನತ್, ಪ್ರದೀಪ್, ಯಶೋಧರ್, ಪ್ರಕಾಶ್, ನಾಗೇಶ್ ಮದ್ವ, ಅನಿಲ್, ಕಿರಣ್, ಅಕ್ಷಯ್ ಶೆಟ್ಟಿ, ಯೋಗೀಶ್, ರಮಾನಂದ ಶೆಟ್ಟಿ, ಸುಖರಾಮ್, ಗಣೇಶ್, ಲೋಕೇಶ್, ಕಿರಣ್, ಪ್ರಿಯಾ, ಹಾಗೂ ಮಂಜುಳಾ ಜೊತೆಗಿದ್ದರು. ಗ್ರೂಪ್ನ ನೆರವಿಗೆ ಬಾಲಕನ ತಾಯಿ ಹೇಮಾ ಹಾಗೂ ತಂದೆ ಸತೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.
ಅನೇಕ ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಿರುವ ಹಿಂದೂ ವಾರಿಯರ್ಸ್ನ ಐದನೆಯ ಯಶಸ್ವಿ ಸೇವೆಯಾಗಿದೆ. ಎಲ್ಲಾ ವಾಟ್ಸ್ಯಾಪ್ ಗ್ರೂಪ್ಗಳು ಇದೇ ರೀತಿ ಸೇವೆ ಒದಗಿಸಿ ಮಾದರಿಯಾಗಬೇಕು ಎಂಬ ಸಂದೇಶವನ್ನು ಈ ಗ್ರೂಪ್ ನೀಡಿದೆ.

