ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಶೇ.15 ಡಿವಿಡೆಂಡ್ ಘೋಷಣೆ
ಬಂಟ್ವಾಳ : ಬಂಟ್ವಾಳದಲ್ಲಿ ಕೇಂದ್ರ ಕಛೇರಿ ಇರುವ ಬಿ.ಮೂಡ, ನಾವೂರು ಮತ್ತು ಪಂಜಿಕಲ್ಲು ಶಾಖೆಗಳನ್ನು ಹೊಂದಿರುವ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘವು 2014-15ನೇ ಸಾಲಿನಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಿದೆ ಎಂದು ಅಧ್ಯಕ್ಷ ಜಿ.ಆನಂದ ಅವರು ತಿಳಿಸಿದ್ದಾರೆ.
ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ಆ.30ರಂದು ಜರಗಿದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಹೇಳಿದರು.
ಸಹಕಾರಿ ಸಂಘವು 2014-15ನೇ ಸಾಲಿನ ಅಂತ್ಯಕ್ಕೆ 123 ಕೋಟಿ ರೂ.ಗಳ ವಾರ್ಷಿಕ ವ್ಯವಹಾರ ನಡೆಸಿ 48,62,489ರೂ. ಲಾಭ ಗಳಿಸಿದೆ ಎಂದು ಅವರು ವಿವರಿಸಿದರು. ಸಂಘವು ಒಟ್ಟು 2,865 ಸದಸ್ಯತನ ಹೊಂದಿದ್ದು 75, 14,270 ರೂ. ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ 22.13 ಕೋಟಿ ರೂ. ಸಾಲ ನೀಡಿದ್ದು ಕ್ಲಪ್ತ ಸಮಯದಲ್ಲಿ ಮರುಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸಂಘದ ಠೇವಣಿಯನ್ನು 23 ಕೋಟಿಗೆ ಏರಿಸುವುದು, ಸ್ವ ಸಹಾಯ ಗುಂಪು ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುವುದು, ಬಿ ಮೂಡ ಗ್ರಾಮದಲ್ಲಿರುವ ಸ್ವಂತ ನಿವೇಶನದಲ್ಲಿ ಕಟ್ಟಡ ನಿರ್ಮಿಸುವುದು ಮುಂದಿನ ಯೋಜನೆಗಳಾಗಿದ್ದು ಸದಸ್ಯರು ಸಹಕರಿಸಬೇಕಾಗಿ ಅವರು ವಿನಂತಿಸಿದರು.
ಉಪಾಧ್ಯಕ್ಷ ಎಂ.ಮಹಾಬಲ ಶೆಟ್ಟಿ , ನಿರ್ದೇಶಕರಾದ ಎಂ.ಕರುಣೇಂದ್ರ ಪೂಜಾರಿ, ಮನೋಹರ ಮೂಲ್ಯ , ಕೆ.ಎನ್.ಶೇಖರ್, ಸತ್ಯಶಂಕರ ರಾವ್ ಕೆ., ಲಕ್ಷ್ಮಿ ವಿ. ಪ್ರಭು, ವಿದ್ಯಾವತಿ ಪ್ರಮೋದ್ ಕುಮಾರ್, ಕೆ.ಪ್ರಕಾಶ್, ಬಿ.ಸದಾಶಿವ ಶೆಣೈ, ಬ್ಯಾಂಕ್ ಪ್ರತಿನಿಧಿ ಕೇಶವ ಕಿಣಿ, ಕೇಂದ್ರ ಕಛೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್, ಮತ್ತು ಬಿ ಮೂಡ, ನಾವೂರು ಮತ್ತು ಪಂಜಿಕಲ್ಲು ಶಾಖೆಗಳ ಕಾರ್ಯನಿರ್ವಹಣಾಧಿಕಾರಿಗಳು, ಸಿಬಂದಿ ವರ್ಗ ಉಪಸ್ಥಿತರಿದ್ದರು.
