ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಬ್ಬರು ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಗುರುವಾರ ಸಂಜೆ ನಡೆದಿದೆ.
ಇಲ್ಲಿನ ಬಿಜೆಪಿ ಕಾರ್ಯಕರ್ತ ರಾಯಿ ಸಮೀಪದ ಕನ್ಯಾ ನಿವಾಸಿ ಪರಮೆಶ್ವರ ಪೂಜಾರಿ ಎಂಬವರು ಸ್ಥಳೀಯ ಅಣ್ಣಳಿಕೆ ಎಂಬಲ್ಲಿ ಗುರುವಾರ ನಡೆಯುತ್ತಿದ್ದ ಮಕ್ಕಳ ಕ್ರಿಕೆಟ್ ಪಂದ್ಯಾಟ ವೀಕ್ಷಿಸುತ್ತಿದ್ದ ವೇಳೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತ ಕೊಯಿಲ ನಿವಾಸಿ ಸತೀಶ ಪೂಜಾರಿ ಎಂಬವರು ಬೈಕಿನಲ್ಲಿ ಪ್ರಯಾಣಿಸುತ್ತಾ ದುರುಗುಟ್ಟಿ ನೋಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೊಯಿಲ ಪೇಟೆ ಅಂಗಡಿಯೊಂದರ ಬಳಿ ಸತೀಶ ಪೂಜಾರಿ ಗುರುವಾರ ಸಂಜೆ ನಿಂತಿದ್ದ ವೇಳೆ ಪರಮೇಶ್ವರ ಪೂಜಾರಿ ಮತ್ತು ಆತನ ಪುತ್ರ ಧನುಷ್ ಧಾವಿಸಿ ವಿಚಾರಿಸಿದಾಗ ಪರಸ್ಪರ ನಿಂದಿಸಿ ಹೊಡೆದಾಡಿಕೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಪರಸ್ಪರ ಹಲ್ಲೆ ದೂರು ದಾಖಲಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.