ಭಟ್ಕಳ: ಮಡದಿಯನ್ನು ಜ್ಯೂಸ್ ಮೂಲಕ ಮಾತ್ರೆ ನೀಡಿ ಕೊಲೆಗೈದ ಘಟನೆ ಭಟ್ಕಳದ ಮಂಕಿ ಎಂಬಲ್ಲಿ ಫೆ.15ರಂದು ನಡೆದಿದ್ದು, ಕೊಲೆಗೈದ ಗಂಡ ತಲೆಮರೆಸಿಕೊಂಡಿದ್ದಾನೆ. ಕೊಲೆಗೀಡಾದ ದುರ್ದೈವಿ ಮಹಿಳೆಯನ್ನು ಭ್ಕಳದ ಮಂಕಿ ನಿವಾಸಿ ಶಿಲ್ಪಾ ಗಣೇಶ್(25) ಎಂದು ಗರುರುತಿಸಲಾಗಿದೆ. ಈಕೆ ಕಳೆದ ಮೂರು ವರ್ಷಗಳ ಹಿಂದೆ ಹೊನ್ನಾವರದ ಗಣೇಶ್ ಎಂಬಾತನನ್ನು ಮದುವೆಯಾಗಿದ್ದಳು.

ಶಿಲ್ಪಾ ಗಂಡನ ಜೊತೆ ಅತೃತ್ಪಿಯ ಜೀವನ ನಡೆಸುತ್ತಿದ್ದು, ಪತಿ ಗಣೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಂಡನ ಕಿರುಕುಳ ತಾಳಲಾರದೆ ಶಿಲ್ಪಾ ತನ್ನ ತವರು ಮನೆಯಾದ ಮಂಕಿಯಲ್ಲಿ ವಾಸಿಸುತ್ತಿದ್ದಳು.
ಆದರೆ ಭಾನುವಾರ ಬೆಳಿಗ್ಗೆ ಗಣೇಶ್ ತನ್ನ ಮಡದಿ ಶಿಲ್ಪಾಳನ್ನು ಮಂಕಿಯ ಮಂದಿರವೊಂದರಲ್ಲಿ ಭೇಟಿಯಾಗಿದ್ದ ಎನ್ನಲಾಗಿದ್ದು ಆಕೆಗೆ ಒತ್ತಾಯ ಪೂರ್ವಕವಾಗಿ ಜ್ಯೂಸ್ ಕುಡಿಯಲು ನೀಡಿದ್ದ. ಕುಡಿಯದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದ. ಅದರ ಜೊತೆಗೆ ಕೆಲವೊಂದು ಮಾತ್ರೆಗಳನ್ನು ಒತ್ತಾಯಪೂರ್ವಕವಾಗಿ ತಿನ್ನಿಸಿದ್ದ. ಮನೆಗೆ ಮರಳಿದ ಶಿಲ್ಪಾ ಅಸ್ವಸ್ಥಗೊಂಡಿದ್ದು ತಕ್ಷಣ ಈಕೆಯನ್ನು ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ದಾರುಣವಾಗಿ ಅಂತ್ಯ ಕಂಡಿದ್ದಾಳೆ.
ಇದಾದ ಕೆಲವು ದಿನಗಳ ನಂತರ ಗಣೇಶ್ ತಲೆಮರೆಸಿಕೊಂಡಿದ್ದು ಆತನ ಮೇಲೆ ಶಂಕೆ ಮೂಡಿದೆ. ಶಿಲ್ಪಾಳ ಮೃತದೇಹವನ್ನು ಮಂಕಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಮೃತದೇಹವನ್ನು ಮನೆಯವರಿಗೆ ಒಪ್ಪಿಸಲಾಗಿದೆ.ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

