ಮಂಗಳೂರು: ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜನರು ಆಧಾರ್ ಕಾರ್ಡ್ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಮಂಗಳೂರಿನ ಲಾಲ್ಭಾಗ್ನಲ್ಲಿರುವ ಮಹಾನಗರಪಾಲಿಕೆಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ನೂಕು ನುಗ್ಗಲು ಉಂಟಾಗುತ್ತಿದ್ದು, ದಿನನಿತ್ಯ ಎಂಬಂತೆ ಕಾಳಗ ನಡೆಯುತ್ತಲೇ ಇದೆ.
ಇಂದು ಮಧ್ಯಾಹ್ನ ಆಧಾರ್ ಕಾರ್ಡ್ ಮಾಡಿಸಲು 300ಕ್ಕೂ ಅಧಿಕ ಮಂದಿ ನಿಂತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೋರ್ವ 5 ಮಂದಿಯ ಅರ್ಜಿಯನ್ನು ತಂದು 5 ಮಂದಿಗೂ ಟೋಕನ್ ಕೊಡುವಂತೆ ಭಿನ್ನೈಯಿಸಿದ. ಆದರೆ ಸೆಕ್ಯೂರಿಟಿ ಹಾಗೂ ಇತರ ಸಿಬ್ಬಂದಿ ಅದಕ್ಕೆ ಅನುವು ಮಾಡಕೊಡದಿರುವುದರಿಂದ ವ್ಯಕ್ತಿ ಗಲಾಟೆಗೆ ತೊಡಗಿದ್ದಾನೆ. ಈ ವೇಳೆ ಜನರು ಸಾಲು ತಪ್ಪಿದ್ದರಿಂದ ಜನರ ಮಧ್ಯೆ ಘರ್ಷಣೆ ಉಂಟಾದ ಘಟನೆಯೂ ನಡೆಯಿತು. ಕೊನೆಗೆ ಗಲಾಟೆಗೆ ತೊಡಗಿದ್ದ ವ್ಯಕ್ತಿಯನ್ನು ಜನರೇ ಸೇರಿ ಸಾಗಹಾಕಿದ್ದರಿಂದ ಅರ್ಧ ಗಂಟೆಗಳ ಕಾಲ ಟೋಕನ್ ಕೊಡಲು ವಿಳಂಬ ಉಂಟಾಗಿದೆ.

ಆಧಾರ್ಗಾಗಿ ಮನಪಾದಲ್ಲಿ ಪ್ರತಿನಿತ್ಯವೂ ಇದೇ ರೀತಿ ಗಲಾಟೆ ನಡೆಯುತ್ತಲೇ ಇದೆ, ಆದರೆ ಜಿಲ್ಲಾಧಿಕಾರಿಯಾಗಲೀ, ಮನಪಾ ಆಯುಕ್ತರಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರ್ವಜನಿಕರು ಆರೋಪಿಸಿದ್ದಾರೆ.
ಬಿಗಡಾಯಿಸಿದ ಟೋಕನ್ ವ್ಯವಸ್ಥೆ:
ಮನಪಾದಲ್ಲಿ ಆಧಾರ್ ಗ್ರಾಹಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಕನ್ ವ್ಯವಸ್ಥೆ ಅಳವಡಿಸಲಾಗಿದೆ. ದಿನವೊಂದಕ್ಕೆ 120 ಟೋಕನ್ಗಳನ್ನು ವಿತರಿಸಲಾಗುತ್ತದೆ. ಬೆಳಿಗ್ಗೆ 60 ಮಧ್ಯಾಹ್ನದ 60 ಮಂದಿಗೆ ಆಧಾರ್ ಕಾರ್ಡ್ ಮಾಡಿಸಲಾಗುತ್ತಿದೆ. iÁದರೆ 120 ಸಂಖ್ಯೆಯ ಒಳಗಿನ ಟೋಕನ್ ಪಡೆಯಲು ಗ್ರಾಹಕರು ಅಕ್ಷರಶಃ ಪರದಾಟ ನಡೆಸುತ್ತಿದ್ದಾರೆ.
ಬೆಳಿಗ್ಗೆ 9.30ಕ್ಕೆ ಕಚೇರಿ ತೆರೆಯಲಾಗುತ್ತಿದ್ದು, ಇಬ್ಬರು ಸಿಬ್ಬಂದಿ ಟೋಕನ್ ವಿತರಿಸುತ್ತಾರೆ. ಆದರೆ ಈ ಟೋಕನ್ ಪಡಯಲು ದಿನವೊಂದಕ್ಕೆ 300ಕ್ಕಿಂತಲೂ ಜಾಸ್ತಿ ಜನರು ಬರುತ್ತಾರೆ. 9.30 ಅಥವಾ 10 ಗಂಟೆಯ ನಂತರ ಕಚೇರಿ ತೆರೆಯುವ ಕಾರಣ ಟೋಕನ್ ಪಡೆಯಲು ದೂರದೂರಿನಿಂದ ಬರುವ ಜನರು ಬೆಳಿಗ್ಗೆ 5 ಗಂಟೆಯಿಂದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಬೆಳಿಗ್ಗೆ 7-8 ಗಂಟೆಯಾವಗುವವರೆಗೆ 300ಕ್ಕಿಂತಲೂ ಅಧಿಕ ಜನರ ಸಾಲು ಸಿದ್ಧವಾಗಿರುತ್ತದೆ. 120ಕ್ಕಿಂತ ಹೆಚ್ಚು ಜನರಾದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ವಾಪಾಸ್ ಕಳಿಸುತ್ತಾರೆ.
ಆಧಾರ್ ಬೇಕಾದವರು ಸಾಲು ನಿಲ್ಲಿ ಎಂದು ಘರ್ಜಿಸುವ ಸಿಬ್ಬಂದಿ:
`ಆಧಾರ್ ಕಾರ್ಡ್ ಬೇಕಾದರೆ ನೀವು ಸಾಲು ನಿಲ್ಲಿ, ಒಂದು ಕುಟುಂದಲ್ಲಿ 5 ಮಂದಿ ಇದ್ದರೆ 5 ಮಂದಿಯೂ ಸಾಲಿನಲ್ಲಿ ನಿಲ್ಲಲೇಬೇಕು. ಅದು ಬಿಟ್ಟು ಒಬ್ಬ ಬಂದು ಸಾಲಿನಲ್ಲಿ ನಿಂತರೆ ಟೋಕನ್ ಕೊಡುವುದಿಲ್ಲ. ಅವರಿಗೆ ಸೌಖ್ಯ ಇಲ್ಲದಿದ್ದರೂ ಪರವಾಗಿಲ್ಲ ಸಾಲು ನಿಲ್ಲಲೇಬೇಕು ಎಂದು ಸಿಬ್ಬಂದಿ ಆಗಾಗ ಬಂದು ಘರ್ಜಿಸುವುದು ಸಾಮಾನ್ಯವಾಗಿದೆ. ಆಧಾರ್ ಕಾರ್ಡ್ ಅಗತ್ಯವಾದುದರಿಂದ ಇವರ ಘರ್ಜನೆಯನ್ನು ಸಹಿಸಿಕೊಂಡು ಜನರು ಸಾಲಿನಲ್ಲಿ ನಿಲ್ಲುತ್ತಾರೆ. ಬೆಳಗ್ಗಿನಿಂದಲೇ ತನ್ನ ಸಣ್ಣ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಬರುವ ವಯಸ್ಸಾದ ಮಹಿಳೆಯರು, ಬಾಣಂತಿಯರು, ಗರ್ಭಿಣಿಯರು, ವೃದ್ಧರು ಬರೀ ಹೊಟ್ಟೆಯಲ್ಲಿ ನಿಂತು ಹಿಡಿಶಾಪ ಹಾಕುತ್ತಾ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅದರ ನಡುವೆ ಜನರ ಮಧ್ಯೆಯೇ ಗಲಾಟೆ ನಡೆಯುತ್ತಲೇ ಇರುತ್ತದೆ. ಟೋಕನ್ ಸಿಗದೆ ಬರಿಗೈಯ್ಯಲ್ಲಿ ಮರಳುವವರು ನೂರಾರು ಮಂದಿ ಇರುತ್ತಾರೆ. ಕೆಲವರು ಒಂದು ಆಧಾರ್ ಕಾರ್ಡ್ಗಾಗಿ ಅನೇಕ ದಿನ ಬಂದು ಹಿಂದಿರುಗಿದವರೂ ಇದ್ದಾರೆ. ಆದರೆ ಆಧಾರ್ ಗ್ರಾಹಕರಿಗೆ ಒಂದು ತೊಟ್ಟು ನೀರಿನ ವ್ಯವಸ್ಥೆಯನ್ನೂ ಮನಪಾ ಮಾಡಿಕೊಂಡಿಲ್ಲ.
ಜನರಿಗೆ ಅಗತ್ಯವಾದ ಆಧಾರ್ ಕಾರ್ಡ್ ಮಾಡಿಸಲು ಸರಕಾರ ಸರಿಯಾದ ವ್ಯವಸ್ಥೆಯನ್ನೇ ಮಾಡಿಸಿಲ್ಲ. ಮಂಗಳೂರಿನಲ್ಲಿ ಮನಪಾದಲ್ಲಿ ಮಾತ್ರ ಈ ವ್ಯವಸ್ಥೆ ಇರುವುದರಿಂದಲೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಯಾಯ ಪ್ರದೇಶದ ನಾಡಕಚೇರಿಯಲ್ಲಿ ಆಧಾರ್ ಮಾಡಿಸಲು ವ್ಯವಸ್ಥೆ ಕಲ್ಪಿಸುವುದಾಗಿ ಡೀಸಿ ಆದೇಶಿಸಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.



