ಸುದ್ದಿ9 ಮೂಡುಬಿದರೆ: ದೇಶದ ಬಗ್ಗೆ ನಕಾರತ್ಮಕ ಅಂಶಗಳನ್ನೇ ಯೋಚಿಸಿ ಯುವಜನತೆ ಕುಗ್ಗುತ್ತಿರುವುದು ಸರಿಯಲ್ಲ, ಭಾರತದ ಶ್ರೇಷ್ಠತೆಯನ್ನು ಅರಿತು ಮುನ್ನಡೆದರೆ ದೇಶ, ಯುವಶಕ್ತಿ ಎರಡೂ ಮುನ್ನಡೆಯುತ್ತದೆ. ತಪ್ಪು ಮಾಡುವ ಮುಂಚೆ ಸರಿಯಿರಬೇಕೆಂಬ ಪ್ರಜ್ಞೆ ಮೂಡಿದಾಗ ಬದಲಾವಣೆ ಬರುತ್ತದೆ. ದೇಶದ ಘನತೆಗೆ ಪೂರಕವಾದ ವ್ಯಕ್ತಿತ್ವ ಯುವಜನರದ್ದಾಗಿರಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ `ರೋಸ್ಟ್ರುಮ್’ ಸ್ಪೀಕರ್ ಕ್ಲಬ್ ಆಶ್ರಯದಲ್ಲಿ ಸೋಮವಾರ ಅವರು `ಭಾರತದ ಭವಿಷ್ಯದಲ್ಲಿ ನಮ್ಮ ಪಾತ್ರ’ ವಿಷಯದ ಬಗ್ಗೆ ಮಾತನಾಡಿದರು. ಶಿಕ್ಷಣ ಹೊಸ ಅನ್ವೇಷಣೆಗಳಿಗೆ, ಹೊಸತನಕ್ಕೆ ನಾಂದಿಯಾಡಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಕನಸುಗಳೊಂದಿಗೆ ಭಾರತೀಯತೆಯಿದ್ದರೆ ದೇಶ ವಿಶ್ವದ ಗುರುವಾಗಲು ಸಾಧ್ಯ.ಮತಾಂತರ ಆಗುವುದರಿಂದಲ್ಲ. ಮತಾಂತರ ಮಾಡುವುದರಿಂದ ಮರುಮತಾಂತರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಚಕ್ರವರ್ತಿ ಸೂಲಿಬೆಲೆ ಅವರನ್ನು ಪ್ರೊ. ಸತ್ಯಪ್ರಕಾಶ್ ಪರಿಚಯಿಸಿದರು. ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




