ಕೈಕಂಬ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಸಮೀಪದ ವಿಕಾಸ ನಗರ ಎಂಬಲ್ಲಿ ಶುಕ್ರವಾರ ಸಂಜೆ 9ರ ಸುಮಾರಿಗೆ ನಡೆದಿದೆ. ಮೃತಪಟ್ಟ ದುರ್ದೈವಿ ಹೆಬ್ರಿಯ ಶಿವಪುರ ನಿವಾಸಿ ಉದಯ ಶೆಟ್ಟಿ(37) ಎಂದು ತಿಳಿದುಬಂದಿದೆ.

ಮಂಗಳೂರಿನಿಂದ ಮೂಡಬಿದ್ರೆಗೆ ತನ್ನ ಪಲ್ಸರ್ ಬೈಕ್ ಹತ್ತಿ ಬಂದ ಸವಾರರು ಕೈಕಂಬ ಸಮೀಪದ ವಿಕಾಸ ನಗರ ಎಂಬಲ್ಲಿ ಬರುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಕೈಕಂಬದತ್ತ ಬರುತ್ತಿದ್ದ ಸಜೇಶ್ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಆಯತಪ್ಪಿ ನೇರವಾಗಿ ಬಸ್ನ ಮುಂದಿನ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ ಸವಾರ ನಿತೀಶ್ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಇವರಿಬ್ಬರು ಪ್ರೀತಿ ಮಿಕ್ಸ್ ಸೇಲ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಮೂಡಬಿದ್ರೆಯತ್ತ ತೆರಳುತ್ತಿದ್ದರು ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ಸವಾರನನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


