ಸುದ್ದಿ9 ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಗೆ ಕೆಎಸ್ಆರ್ಟಿಸಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ 18 ಮಂದಿಗೆ ಗಾಯವಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಪುತ್ತೂರು ಮತ್ತು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು-ಮಣಿಪಾಲ-ಉಡುಪಿ ಕಡೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಸ್ಲೀಪರ್ ಕೋಚ್ ಬಸ್ ಈ ಅವಘಡಕ್ಕೆ ತುತ್ತಾಗಿದೆ. ಬಸ್ ನಲ್ಲಿ ಒಟ್ಟು 32 ಪ್ರಯಾಣಿಕರಿದ್ದು, ಅದರಲ್ಲಿ 18 ಮಂದಿಗೆ ಗಾಯವಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಂಜಾನೆ ಸುಮಾರು 4-30ಕ್ಕೆ ಈ ದುರ್ಘಟನೆ ನಡೆದಿದ್ದು, ಬಸ್ ಬಿದ್ದ ತಕ್ಷಣ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವೊಂದು ಖಾಸಗಿ ಬಸ್ ಹಾಗೂ ಲಾರಿ ಚಾಲಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು, ನೇತ್ರಾವತಿ ನದಿಯಲ್ಲಿ ನೀರಿನ ಅರಿವು ಅಷ್ಟಾಗಿ ಇಲ್ಲದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ, ಮಗುಚಿ ಬಿದ್ದ ತೀವ್ರತೆಯಿಂದು ಬಸ್ಸಿನ ಮುಂಭಾಗದ ಟಯರ್ ಸಹ ಕಳಚಿ ಬಿದ್ದಿದೆ ಎಂದು ಪ್ರಯಾಣಿಕರೋರ್ವರು ಪತ್ರಿಕೆಗೆ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಯಾಣಿಕರು ಆಸ್ಪತ್ರೆಗೆ…
ಬಸ್ಸಿನಲ್ಲಿದ್ದ ಗಾಯಾಳುಗಳನ್ನು ಪ್ರಕಾಶ್, ವಿಶ್ವಾಸ್, ಸರೋಜಮ್ಮ, ಸ್ಮೀತಾ, ರತ್ನಮ್ಮಾ, ರಘುನಾಥ ನಾಯಕ್, ವಿನೋದ್ ಕುಮಾರ್, ಬೆನೆಡಿಕ್ಟ್ ಡಿಸೋಜಾ, ಬಾಬಣ್ಣ ನಾಯಕ್, ಇವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಮಚಾದೋ, ಸುನಿಲ್ ಮಚಾದೋ, ಸ್ಟೀಫಾನಿಯಾ ಮಚಾದೋ, ಸ್ಟೀವ್ ಮಚಾದೋ, ಮುರಳೀಧರ್, ಯಮುನಾರನ್ನು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ.




