ಬಂಟ್ವಾಳ : ಕೈಕಂಬ ವಾರ್ಡ್ ಅಭಿಮಾನಿ ಸಂಘದ ವತಿಯಿಂದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದ ಮೊಡಂಕಾಪು ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲಾ ಪ್ರತಿಭಾವಂತ ವಿದ್ಯಾರ್ಥಿ, ಬಿ ಸಿ ರೋಡಿನ ಉದ್ಯಮಿ ಶಮೀಲವುಲ್ಲಾ ಬಿ ಎಚ್ ಬಿ ಅವರ ಪುತ್ರ ಮುಹಮ್ಮದ್ ಶಮ್ಮಾಸ್ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ನೋಟರಿ-ನ್ಯಾಯವಾದಿ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ನಿಕಟಪೂೂರ್ವ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಆದರೆ ವಿದ್ಯಾರ್ಥಿಗಳು ತಮ್ಮ ಸಾಧನೆಯಿಂದ ಹಿಗ್ಗದೆ ಮತ್ತೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕಾರ್ಯಪ್ರವೃತ್ತರಾಗುವ ಮೂಲಕ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ದೇಶಕ್ಕೆ ಗೌರವ ತರುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಯ ಪರವಾಗಿ ಮಾತನಾಡಿದ ಅವರ ತಂದೆ ಶಮೀವುಲ್ಲಾ ಬಿ ಎಚ್ ಬಿ ಅವರು, ಕೈಕಂಬ ವಾರ್ಡ್ ಅಭಿಮಾನಿ ಸಂಘದಿಂದ ಸಾಧನೆಗೈದ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಿರುವುದು ನಮಗೆ ಸಂತೋಷ ಹಾಗೂ ಹೆಮ್ಮೆ ತಂದಿದೆ ಎಂದರು.
ಈ ಸಂದರ್ಭ ವಾರ್ಡ್ ಸಮಿತಿ ಪ್ರಮುಖ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮಿತ್ತಬೈಲು ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದ್ ಅದ್ದೇಡಿ, ಹಾಲಿ ಉಪಾಧ್ಯಕ್ಷ ಜಮಾಲ್ ಎ1, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಪ್ರಮುಖರಾದ ಅಶ್ರಫ್ ಶಾಂತಿಅಂಗಡಿ, ಇಬ್ರಾಹಿಂ ಜಿ ಕೆ ಉಪಸ್ಥಿತರಿದ್ದರು
