ಮಂಗಳೂರು: ಜಗತ್ತಿಗೆ ಭಾರತದಿಂದಲೇ ಸಂಸ್ಕೃತಿಯ ವಿಕಾಸವಾಯಿತು. ನಾಗರಿಕತೆ, ಸಂಸ್ಕೃತಿ, ಸಭ್ಯತೆ ಪ್ರಾರಂಭವಾದದ್ದು ಭಾರತದಲ್ಲಿ. ಭಾರತದ ನಾಗರಿಕತೆ ಅತ್ಯಂತ ಪುರಾತನವಾಗಿದ್ದು, ಇದೇ ಹಿಂದು ಸಂಸ್ಕೃತಿ. ಹಿಂದುತ್ವ ಭಾರತದ ಆತ್ಮ. ಹಿಂದುತ್ವವೇ ಈ ನೆಲದ ರಾಷ್ಟ್ರೀಯತೆ. ಹಿಂದುತ್ವ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಅಂಗವಾಗಿ ಬಂಟ್ವಾಳ ಬಂಟರ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಇಂದು ಹಿಂದುತ್ವ ಬಹುಚರ್ಚಿತ ವಿಷಯ. ಹಿಂದುತ್ವದ ಬಗ್ಗೆ ಕೆಲವರು ನೆಗೆಟಿವ್ ನರೇಟಿವ್ ಸೃಷ್ಟಿ ಮಾಡಿದರು. ಆದರೆ, ಹಿಂದುತ್ವ ಜಗತ್ತಿಗೆ ಬೆಳಕು ನೀಡಿದ ಸಂಸ್ಕೃತಿ. ಇದೊಂದು ಇಸಂ ಅಲ್ಲ. ಕೇವಲ ಪೂಜಾ ಪದ್ದತಿಯಲ್ಲ, ಒಂದು ಜನಾಂಗವಲ್ಲ, ಒಂದು ಸಂಪ್ರದಾಯವೂ ಅಲ್ಲ. ಇದೊಂದು ಜೀವನ ಶೈಲಿ. ಎಲ್ಲರನ್ನೂ ಒಳಗೊಂಡ ಒಂದು ಸಂಸ್ಕೃತಿ. ಈ ಕಾರಣಕ್ಕಾಗಿಯೇ ಭಾಷೆ, ವೇಷ, ಬಣ್ಣ ಮುಂತಾದ ಅನೇಕ ಭಿನ್ನತೆ, ವೈವಿಧ್ಯತೆಗಳಿದ್ದರೂ ನಾವೆಲ್ಲರೂ ಒಂದು ಎನ್ನುವ ಭಾವನೆಯೊಂದಿಗೆ ಒಟ್ಟಾಗಿ ಬದುಕುತ್ತಿದ್ದೇವೆ ಅವರು ವಿಶ್ಲೇಷಿಸಿದರು.
ಹಿಂದುತ್ವವೇ ರಾಷ್ಟ್ರೀಯತೆ ಎಂದು ಸಂಘ ಪ್ರತಿಪಾದಿಸುತ್ತದೆ. ರಾಷ್ಟ್ರೀಯ ಎಂದರೆ ಈ ನೆಲದ ಸಂಸ್ಕೃತಿಯ ವಾಹಕ. ಈ ನೆಲದ ಸಂಸ್ಕೃತಿಯನ್ನು ಪಾಲಿಸಿ, ಅಳವಡಿಸಿ, ಗೌರವಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವವನೇ ರಾಷ್ಟ್ರೀಯ ಎಂದು ಕರೆಸಿಕೊಳ್ಳುತ್ತಾನೆ. ಯಾರು ದೇಶವನ್ನು ತಾಯಿ ಎಂದು ತಿಳಿದುಕೊಂಡು ತಾನು ಈ ತಾಯಿಯ ಪುತ್ರ ಎಂಬ ಭಾವನೆಯೊಂದಿಗೆ ಸಮಾನ ಭಾವವನ್ನು ಹೊಂದುತ್ತಾನೋ ಆತ ರಾಷ್ಟ್ರೀಯನಾಗುವುದಕ್ಕೆ ಅರ್ಹ ವ್ಯಕ್ತಿಯಾಗುತ್ತಾನೆ. ಆದ್ದರಿಂದ, ಹಿಂದು- ಹಿಂದುತ್ವ ಜನಾಂಗ ವಾಚಕ ಪದವಲ್ಲ, ಸಾಂಸ್ಕೃತಿಕ ವಾಚಕ ಪದ ಎಂದು ಅಭಿಪ್ರಾಯಪಟ್ಟರು.
ಬಳಿಕ ಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರಮುಖರು, ಗಣ್ಯರ ಜತೆಗೆ ಪ್ರಸ್ತುತ ವಿಚಾರಗಳ ಬಗ್ಗೆ ಸಂವಾದ ನಡೆಸಲಾಯಿತು.
ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ್ ವೈ.ಎನ್. ಸಾಲಿಯಾನ್ ಮುಲ್ಕಿ ಉಪಸ್ಥಿತರಿದ್ದರು. ಸುಜಿತ್ ಕಲ್ಲಡ್ಕ ಸ್ವಾಗತಿಸಿ, ವಿನೋದ್ ವಂದಿಸಿದರು. ಅಭಿರಾಮ್ ವೈಯಕ್ತಿಕ ಗೀತೆ ಹಾಡಿದರು. ವಿದ್ಯಾ ಆಚಾರ್ಯ ಕಲ್ಲಡ್ಕ ವಂದೇ ಮಾತರಂ ಹಾಡಿದರು. ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *