ಬಂಟ್ವಾಳ: ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ವರ್ಷಾವಧಿ ಜಾತ್ರೆಯು ವಿವಿಧ ವೈಧಿಕ, ಧಾರ್ಮಿಕ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು.

ಮೊದಲ ದಿನ ಮಹಾಮ್ಮಾಯಿ ದೇವರ ರಾಶಿ ಪೂಜೆ, ನರ್ತನ ಸೇವೆ, ಶ್ರೀ ವಿಷ್ಣುಮೂರ್ತಿ ದೈವದ ನೇಮ, ಎರಡನೇ ದಿನ ನಾಗದೇವರಿಗೆ ತಂಬಿಲ ಸೇವೆ, ದೈವಗಳಿಗೆ ಕಲಶ ಪರ್ವ, ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಸಂಕ್ರಾಂತಿ ಸೇವೆ, ಶ್ರೀ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ಧೂಮ್ರ ಧೂಮಾವತಿ, ರಕ್ತೇಶ್ವರಿ, ಮಹಿಸಂದಾಯ, ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಹಾಗೂ ಕೊನೆಯ ದಿನದಂದು ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳ ಪಾತ್ರಿಗಳು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಬಂದು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಮಾಯಾಂದತಿ ದೇವಿಯ ನೇಮೋತ್ಸವದೊಂದಿಗೆ ಬ್ರಹ್ಮಬೈದರ್ಕಳ ಜಾತ್ರೆಯು ವಿದ್ಯುಕ್ತವಾಗಿ ನೆರವೇರಿತು.
ಶ್ರೀಮತಿ ಚೆನ್ನಮ್ಮ ಸುಬ್ಬ ಪೂಜಾರಿ ಕೊರಂಟಬೆಟ್ಟುಗುತ್ತು ಮತ್ತು ಶ್ರೀಮತಿ ಸುಲೋಚನಾ ದತ್ತರಾಮ್ ಗಾಯಕ್ ವಾಡ್ ಮುಂಬಾಯಿ ಸ್ಮರಣಾರ್ಥ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯ ವಾರ್ಷಿಕ ಪರೀಕ್ಷೆಯಲ್ಲಿ ಶೇಖಡಾ 85ಕ್ಕಿಂತ ಹೆಚ್ಚಿನ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗರಡಿ ಫ್ರೆಂಡ್ಸ್ ಕೊರಂಟಬೆಟ್ಟು ಗುತ್ತು ಪ್ರಾಯೋಜಕತ್ವದಲ್ಲಿ ಶ್ರೀನಿವಾಸ ನಗರ ಕಿರಿಯ ಪ್ರಾಥಮಿಕ ಶಾಲೆ, ಮೂಡುಪಡುಕೋಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಆಲದಪದವು ಅಕ್ಷರ ಭಾರತಿ ವಿದ್ಯಾಲಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
