ಬಂಟ್ವಾಳ.:ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿಯನ್ನು ಮೂಡಿಸಿ ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಮಾಡಿಕೊಡಬೇಕು. ಹಲವು ಭಾಷೆ,ಸಂಸ್ಕೃತಿಗಳಿದ್ದರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಜಾಗೃತವಾಗಬೇಕು ಎಂದು ಹಿರಿಯ ಸಾಹಿತಿ ಸವಿತಾ ಎಸ್ .ಭಟ್ ಅಡ್ವಾಯಿ ಹೇಳಿದರು.
ಶಾಲಾ ಗ್ರಂಥಾಲಯಕ್ಕೆ ಸ್ವರಚಿತ ಕೃತಿಗಳನ್ನು ಸಂಚಾಲಕರಿಗೆ ಹಸ್ತಾಂತರಿಸಿ ಕವಿತೆ ವಾಚನಮಾಡಿ ಅವರು ಮಾತನಾಡಿದರು.
ಅವರು ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ದೇಶಭಕ್ತಿ ಗೀತೆಗಳ ಹಬ್ಬವನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳ ಹಸ್ತ ಪ್ರತಿ ವಾರ್ಷಿಕ ಸಂಚಿಕೆ ಜ್ಞಾನ ಸರಸ್ವತಿ ಸಾಹಿತ್ಯ ದೀವಿಗೆ ಕೃತಿಯನ್ನು ಹಿರಿಯ ಬರಹಗಾರ ಜಯಾನಂದ ಪೆರಾಜೆ ಬಿಡುಗಡೆಗೊಳಿಸಿದರು. ಮಕ್ಕಳ ಬೌದ್ಧಿಕ ವಿಕಾಸ ಹಾಗೂ ಜ್ಞಾನ ಸಂಗ್ರಹಕ್ಕೆ ಪುಸ್ತಕದ ಓದು ಅವಶ್ಯಕವಾಗಿದ್ದು ಓದುವ ಹವ್ಯಾಸವನ್ನು ದಿನಪತ್ರಿಕೆ ಓದುವ ಮೂಲಕ ಬೆಳೆಸಿಕೊಳ್ಳಬೇಕೆಂದರು.ಪುಸ್ತಕ ಬಹುಮಾನ ವಿತರಿಸಿ ಶುಭಹಾರೈಸಿದರು.
ಧ್ವಜಾರೋಹಣದ ಬಳಿಕ ಸ್ಕೌಟ್ಮತ್ತುಗೈಡ್ ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು. ಶಾಲಾ ಸಂಚಾಲಕ ಈಶ್ವರ ಪ್ರಸಾದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಆಡಳಿತಾಧಿಕಾರಿ ಮಧುರಾ ಈಶ್ವರ ಪ್ರಸಾದ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಿಂದ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ವಿದ್ಯಾರ್ಥಿಗಳಾದ ಸಂತೃಪ್ತ ಭಟ್ ಸ್ವಾಗತಿಸಿ, ಶ್ರುತ ಕಿರಣ ಭಟ್ ನಿರೂಪಿಸಿ,ಪದ್ಮಾ ವಂದಿಸಿದರು.
