ನ. 9 ರಂದು ಬಂಟ್ವಾಲ ತಾಲೂಕು ಬಿಲ್ಲವ ಸಂಘದಿಂದ ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನ. 9 ರಂದು ಬೆಳಗ್ಗೆ 9 ರಿಂದ ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡ್ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರು ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಮಂಗಳೂರು ಡಯಟ್ ಸೆಂಟರ್ನ ಹಿರಿಯ ಉಪನ್ಯಾಸಕರಾದ ಡಾ. ತ್ರಿವೇಣಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು,ಖ್ಯಾತ ವೈದ್ಯ ಡಾ. ಸಂತೋಷ್ ಬಾಬು, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ ಪೂಜಾರಿ, ಉದ್ಯಮಿ ಓಂಪ್ರಸಾದ್ ಬಾರ್ದಿಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮುದಾಯ ಹಾಗೂ ಸಂಘಟನೆ ಎಂಬ ವಿಚಾರದ ಬಗ್ಗೆ ಅಪ್ತ ಸಮಾಲೋಚಕರಾದ ಸ್ಮಿತೇಶ್ ಎಸ್ ಬಾರ್ಯ ಅವರು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ವೈದ್ಯರಾದ ಡಾ. ಸದಾನಂದ ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯಾನ್ ಅಧ್ಯಕ್ಷ ನವೀನ್ಚಂದ್ರ ಡಿ ಸುವರ್ಣ, ಕೆದ್ದೇಲುಗುತ್ತು ಶ್ರೀ ನಾಲ್ಕೆತ್ತಾಯ ಪಂಜುರ್ಲಿ ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಭಾಗ್, ಉದ್ಯಮಿ ದಿನೇಶ್ ಎಂ.ಪಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.
ಗುರುವಂದನಾ ಪುರಸ್ಕಾರ:
ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ತಾಲೂಕಿನ ಬಿಲ್ಲವ ಸಮುದಾಯದ ಸರಕಾರಿ ಹಾಗೂ ಸರಕಾರೇತರ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ವಿಭಾಗದ ಒಟ್ಟು 225 ಬೋಧಕ-ಬೋಧಕಿಯರಿಗೆ “ಬಿಲ್ಲವ ಗುರುವಂದನಾ ಗೌರವಾಭಿನಂದನೆ” ಹಾಗೂ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಧಕ ಗುರುಗಳಿಗೆ ” ಬಿಲ್ಲವ ಗುರುವಂದನಾ ಪುರಸ್ಕಾರ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಅವರು ಈ ಸಂದರ್ಭ ವಿವರಿಸಿದರು.
ವಿದ್ಯಾರ್ಥಿ ವೇತನ: ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ತಾಲೂಕಿನ ಸ್ಥಾತಕೋತ್ತರ, ತಾಂತ್ರಿಕ, ವೈದ್ಯಕೀಯದ ಅರ್ಹ 100 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸುಮಾರು 5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಗುವುದು,ಸಮುದಾಯದ ಬಲವರ್ಧನೆಯ ದೆಸೆಯಲ್ಲಿ ಸಂಘದ ಮೂಲಕ ಹಲವಾರು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್. ಕೋಶಾಧಿಕಾರಿ ಸುನೀಲ್ ಎನ್ ಕುಂದರ್, ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



