ಬಂಟ್ವಾಳ :ಆಡಂಬರ ಜೀವನಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ಒತ್ತು ನೀಡಿ, ಪ್ರತಿಷ್ಠೆಯ ನೆಪದಲ್ಲಿ ಮೂಲ ಆಚರಣೆಗಳನ್ನು ಬಿಟ್ಟು ಅನಗತ್ಯ ಖರ್ಚುಗಳನ್ನು ಮಾಡಿ ಸಾಲಗಾರರು ಆಗದೆ ಸರಳವಾಗಿ ಮಾಡಿ ಎಂದು ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ತುಕಾರಾಮ ಪೂಜಾರಿ ಕರೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲು, ಬಾಳ್ತಿಲ,, ವೀರಕಂಭ, ಅಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳನ್ನೊಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 171ನೇ ಜನ್ಮದಿನಾಚರಣೆ ಪ್ರಯುಕ್ತ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದಗುರುಪೂಜೆ, ಭಜನಾ ಸಂಕೀರ್ತನೆ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಕೇಶವ ಶಾಂತಿ ರವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಗುರು ಪೂಜೆ ನೆರವೇರಿತು.ಶ್ರೀ ಶಾರದಾಂಬಾ ಭಜನಾ ಮಂದಿರ ಶೃಂಗಗಿರಿ ಗುಂಡಿ ಮಜಲು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ಇದೇ ವೇಳೆ ಸಂಘದ ಗೌರವಾಧ್ಯಕ್ಷರು, ಮಾಜಿ ಶಾಸಕ ರುಕ್ಮಯ ಪೂಜಾರಿ ಹಾಗೂ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಯವರ ನೇತೃತ್ವದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ವಸಂತ ಪೂಜಾರಿ ಬಟ್ಟಹಿತ್ತಿಲು ಸ್ವಾಗತಿಸಿ, ಸಂತೋಷ್ ಕುಮಾರ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು
