ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಪೌಷ್ಟಿಕ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೇತನ್ ಮಾತನಾಡಿ, ಕ್ಷಯ ರೋಗವು ಹರಡುವ ಗಂಭೀರ ಖಾಯಿಲೆಯಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಇಂತಹ ಖಾಯಿಲೆಗಳು ಬಾಧಿಸುತ್ತದೆ. ಅಪೌಷ್ಟಿಕತೆಯ ಜತೆಗೆ ಮದ್ಯಪಾನ, ಧೂಮಪಾನದಂತಹ ಚಟಗಳಿಂದ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಪೌಷ್ಟಿಕತೆ ಕಡಿಮೆ ಮಾಡಲು ಪೌಷ್ಟಿಕ ಆಹಾರ ಸೇವೆ ಅಗತ್ಯವಾಗಿದೆ. ಖಾಯಿಲೆಯ ಕುರಿತು ಜಾಗೃತಿ ಇಲ್ಲದೇ ಇರುವುದರಿಂದಲೂ ಕ್ಷಯ ರೋಗ ಹೆಚ್ಚಾಗುತ್ತಿದ್ದು, ಸರಿಯಾದ ರೀತಿ ಚಿಕಿತ್ಸೆ ನೀಡಿದರೆ ಅದು ೧೦೦ ಶೇ. ಗುಣಮುಖವಾಗುವ ಖಾಯಿಲೆಯಾಗಿದೆ ಎಂದರು.
ಉದ್ಯಮಿ ತೇವು ಚಂದ್ರಶೇಖರ ಆಳ್ವ ಮಾತನಾಡಿ, ಸೇವಾಂಜಲಿಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದು, ಇದು ಮುಂದೆಯೂ ಉತ್ತಮ ರೀತಿಯಲ್ಲಿ ನಡೆಯಬೇಕಿದೆ ಎಂದರು.
ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಪ್ರಸ್ತಾವನೆಗೈದು, ಪ್ರಧಾನಿಯವರ ಟಿಬಿ ಮುಕ್ತ ಭಾರತದ ಅಭಿಯಾನದ ಭಾಗವಾಗಿ ೨೦೨೨ರ ಅಕ್ಟೋಬರ್ನಿಂದ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಗುತ್ತಿದ್ದು, ಈ ವರೆಗೆ ಸುಮಾರು ೧೨ ಲಕ್ಷ ರೂ. ವೆಚ್ಚದಲ್ಲಿ ೧೭೫ಕ್ಕೂ ಹೆಚ್ಚಿನ ಕ್ಷಯ ರೋಗಿಗಳಿಗೆ ನಿರಂತರ ೬ ತಿಂಗಳು ಆಹಾರ ಧಾನ್ಯ ನೀಡಲಾಗಿದೆ ಎಂದರು.
ಪ್ರಮುಖರಾದ ಸುರೇಶ್ ರೈ ಪೆಲಪಾಡಿ, ಪ್ರಸಾದ್ ಕೇಸನಮೊಗರು, ನಾರಾಯಣ ಮೇರಮಜಲು, ಶೇಖರ ಕಲ್ಲತಡಮೆ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಮಮತ ಎ.ಶೆಟ್ಟಿ, ಗಾಯತ್ರಿ ಪ್ರಸಾದ್, ಗಾಯತ್ರಿ ಚಿದಾನಂದ, ಮೋಹನ್ ಬೆಂಜನಪದವು, ಶೋಭಾ ಪ್ರವೀಣ್ ಕಳ್ಳಿಗೆ ಉಪಸ್ಥಿತರಿದ್ದರು. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
