ಬಂಟ್ವಾಳ : ತಾಲೂಕಿನ ಇರ್ವತ್ತೂರು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಂಟು ಗ್ರಾಮಗಳ ವ್ಯಾಪ್ತಿಯ ಕ್ಷಯರೋಗಿಗಳಿಗೆ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ ಯೋಜನೆಯಡಿ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಅವರು ಕ್ಷಯರೋಗಿಗಳಿಗೆ ಕಿಟ್ ವಿತರಿಸಿ ಮಾತನಾಡಿ, ಕ್ಷಯರೋಗಿಗಳಿಗೆ ಪೌಷ್ಠಿಕಾಂಶವುಳ್ಳ ಆಹಾರ ದೊರಕಿದಾಗ ಶೀಘ್ರ ಗುಣಮುಖರಾಗಲು ಸಹಕಾರಿಯಾಗುತ್ತದೆ. ಸಂಘ, ಸಂಸ್ಥೆಗಳು ನಿಕ್ಷಯ ಮಿತ್ರರಾಗಿ ಪ್ರತೀ ತಿಂಗಳು ಪೌಷ್ಠಿಕಾಂಶ ಕಿಟ್ಗಳನ್ನು ನೀಡಲು ಮುಂದಾಗಬೇಕು.ಈ ನಿಟ್ಟಿನಲ್ಲಿ ಇರ್ವತ್ತೂರು ಶಾರದೋತ್ಸವ ಸಮಿತಿಯ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಡೇವಿಡ್ ಅವರು ಕ್ಷಯರೋಗ ಜಾಗೃತಿ ಬಗ್ಗೆ ಮಾಹಿತಿ ನೀಡಿ, ತಾಲೂಕಿನ ಪಿಲಾತಬೆಟ್ಟು ಮತ್ತು ಇರ್ವತ್ತೂರು ಗ್ರಾಮ ಪಂಚಾಯತ್ಗಳು ಕ್ಷಯ ಮುಕ್ತವೆಂದು ಘೋಷಿತಗೊಂಡು ಪ್ರಶಸ್ತಿ ಪಡೆದಿವೆ. ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗ ಹರಡದಂತೆ ಜಾಗೃತಿ ವಹಿಸುವುದು ನಾಗರೀಕರ ಕರ್ತವ್ಯ ವಾಗಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ಸಂಘ ಸಂಸ್ಥೆಗಳು ಇಂತಹ ಆರೋಗ್ಯ ಕುರಿತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮೇಲ್ದರ್ಜೆಗೇರಿದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಸಹಿತ ಸಿಬಂದಿಗಳ ನೇಮಕಾತಿಯಾಗುವ ದೆಸೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಸಹಕರಿಸಬೇಕು ಎಂದರು.
ಶ್ರೀ ಶಾರದೋತ್ಸವ ಸಮಿತಿ ಸಂಚಾಲಕ ಡಾ.ರಾಮಕೃಷ್ಣ ಎಸ್. ಅವರು ಮಾತನಾಡಿ, ಸಮಿತಿ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಕ್ಷಯ ರೋಗಿಗಳಿಗೆ ಕಿಟ್ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ.ಅಶೋಕ್ ರೈ ಅವರು ೮ ಮಂದಿ ಕ್ಷಯ ರೋಗಿಗಳಿಗೆ ಕಿಟ್ ಹಾಗು ಶಾರದೋತ್ಸವ ಸಮಿತಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಪ್ರಾ.ಆ.ಕೇಂದ್ರ ವೈದ್ಯಾಽಕಾರಿ ಡಾ.ರಿತೇಶ್ ಶೆಟ್ಟಿ, ಬಂಟ್ವಾಳ ಕಾರ್ಯನಿರತ ಪತ್ರಕರ್ತಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಸಮಿತಿ ಪದಾಽಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅನ್ವರ್ ಹುಸೇನ್ ಪ್ರಸ್ತಾವಿಸಿದರು. ಹಿರಿಯ ಆರೋಗ್ಯ ಸಹಾಯಕಿ ಸಂಧ್ಯಾ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
