ಮೂಡುಬಿದರೆ: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ತನ್ನ ಮಕ್ಕಳಿಬ್ಬರ ಜತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳುವಾಯಿ ಚರ್ಚ್ ಬಳಿ ಶನಿವಾರ ಮುಂಜಾವ ನಡೆದಿದೆ. ಈ ಪ್ರಕರಣದಲ್ಲಿ ಒರ್ವ ಬಾಲಕ ಮೃತಪಟ್ಟಿದ್ದು ಮತ್ತೊಬ್ಬ ಬಾಲಕ ಹಾಗೂ ಮಹಿಳೆಯನ್ನು ರಕ್ಷಿಸಲಾಗಿದೆ.
ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಬಾವಿ

ಮಹಿಳೆ ಮಕ್ಕಳ ಜತೆ ವಾಸವಾಗಿದ್ದ ಬೆಳುವಾಯಿಯ ಬಾಡಿಗೆ ಮನೆ
ಬೆಳುವಾಯಿಯಲ್ಲಿ ಸುಮಿತ್ರಾ ಹೆಗ್ಡೆ ಎಂಬವರ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳಾದ ದಕ್ಷ (8) ದೀಕ್ಷಿತ್ (6) ಜತೆ ವಾಸವಾಗಿದ್ದ ಜ್ಯೋತಿ (32) ಶನಿವಾರ ಮುಂಜಾನೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆಸೆದು ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಬಾವಿಯೊಳಗಿನಿಂದ ಮಹಿಳೆಯ ಬೊಬ್ಬೆ ಕೇಳಿ ಎಚ್ಚೆತ್ತುಕೊಂಡ ಪಕ್ಕದ ಬಾಡಿಗೆ ಮನೆಯ ಸೋಮನಾಥ ನಾಯ್ಕ ಎಂಬವರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳವು ಸ್ಥಳೀಯರ ಸಹಕಾರದೊಂದಿಗೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ಮೇಲೆತ್ತಿದ್ದು ಈ ಪೈಕಿ ದೀಕ್ಷಿತ್ ಆಗಲೇ ಮೃತಪಟ್ಟಿದ್ದ ಎನ್ನಲಾಗಿದೆ. ಮೃತ ದೇಹವನ್ನು ಮೂಡುಬಿದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮಾರೂರು ಗ್ರಾಮದ ನವೀನ್ಚಂದ್ರ -ಜ್ಯೋತಿ ದಂಪತಿ ಇಬ್ಬರು ಮಕ್ಕಳೊಂದಿಗೆ ಮುಂಬೈಯಲ್ಲಿ ನೆಲೆಸಿದ್ದರು. ನವೀನ್ಚಂದ್ರ ಮುಂಬೈಯಲ್ಲಿ ನಡೆಸುತ್ತಿದ್ದ ಹೋಟೇಲ್ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಮಾನಸಿಕ ಅಸ್ವಸ್ಥನಾಗಿರುವ ಹಿರಿಯ ಮಗ ದಕ್ಷನಿಗೆ ಚಿಕಿತ್ಸೆಯೂ ನಡೆದಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ಊರಿಗೆ ಬಂದಿದ್ದ ಜ್ಯೋತಿ ಮಕ್ಕಳೊಂದಿಗೆ ಬೆಳುವಾಯಿಯಲ್ಲಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದು ಕಳೆದ ದೀಪಾವಳಿಗೆ ಊರಿಗೆ ಬಂದು ಮರಳಿದ್ದ ಗಂಡ ನವೀನ್ಚಂದ್ರ ಸಧ್ಯದಲ್ಲೇ ಮುಂಬೈಯಲ್ಲಿರುವ ಪ್ಲ್ಯಾಟನ್ನು ಮಾರಿ ಊರಿನಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ದಕ್ಷ ಬೆಳುವಾಯಿಯ ಖಾಸಗಿ ಆಂಗ್ಲ ಮಧ್ಯಮ ಶಾಲೆಯಲ್ಲಿ ಎರಡನೇ ತರಗತಿ ಮತ್ತು ದೀಕ್ಷಿತ್ ಎಲ್.ಕೆ.ಜಿಯಲ್ಲಿ ಓದುತಿದ್ದರು. ಬಾಲಕನ ಮೃತಪಟ್ಟ ಹಿನ್ನೆಲೆಯಲ್ಲಿ ಶನಿವಾರ ಶಾಲೆಗೆ ರಜೆ ಸಾರಲಾಗಿತ್ತು.
