ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಅಂಬೇಡ್ಕರ್ ವಸತಿ ಶಾಲೆಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಅಮಾನುಲ್ಲಾ ಮತ್ತಿತರ ಅಧಿಕಾರಿಗಳ ತಂಡ ಮೇ.31ರಂದು ಮಂಗಳವಾರ ಭೇಟಿ ನೀಡಿ ಕಟ್ಟಡ ಪರಿಶೀಲನೆ ನಡೆಸಿದರು.
ಇಲ್ಲಿನ ಬಿ.ಸಿ.ರೋಡು ಅಂಬೇಡ್ಕರ್ ವಸತಿ ಶಾಲೆಗೆ ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್ ಅಮಾನುಲ್ಲಾ ಮತ್ತಿತರ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಕಟ್ಟಡ ಪರಿಶೀಲನೆ ನಡೆಸಿದರು. ಇದೇ ವೇಳೆ ಕಿಟಕಿ ಬಳಿ ಹಾವೊಂದು ಬರುತ್ತಿರುವುದನ್ನು ಕಂಡ ಇನ್ಸ್ ಪೆಕ್ಟರ್ ಸುತ್ತಲೂ ಶುಚಿಗೊಳಿಸಲು ಪುರಸಭೆಗೆ ತಿಳಿಸಲು ಸೂಚಿಸಿದರು. ಈ ವಸತಿ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಕಿಟಕಿ ಬಾಗಿಲು ಮತ್ತು ಕಾಂಕ್ರೀಟು ಸರಳು ತುಕ್ಕು ಹಿಡಿದು ಕುಸಿತದ ಭೀತಿ ಎದುರಿಸುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದರು.
ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ಕಾವಲುಗಾರ ವ್ಯವಸ್ಥೆಯೂ ಇಲ್ಲದೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಬಗ್ಗೆ ಲೋಕಾಯುಕ್ತ ಎಸ್ಪಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ರಾಕೇಶ್ ಕುಮಾರ್ ಕೆ., ಉಪನಿರ್ದೇಶಕ ಸಿದ್ದಲಿಂಗೇಶ್ ಬೇವಿನಮಟ್ಟಿ, ಸಹಾಯಕ ನಿರ್ದೆಶಕಿ ಜಯಶ್ರೀ ಭೇಟಿ ನೀಡಿದರು.
