ಬಂಟ್ವಾಳ: ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ರೂ .೨೦೭.೫೦ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೭೫.೫೭ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಹೇಳಿದ್ದಾರೆ. ಬಿ.ಸಿ.ರೋಡು ಸ್ಪರ್ಶಾ ಕಿರು ಸಭಾಂಗಣದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ೨ ವರ್ಷಗಳಲ್ಲಿ ಕೊರೋನಾ ಮಹಾಮಾರಿಯ ಆರ್ಥಿಕ ಹೊಡೆತದಿಂದ ಪುನಶ್ವೇತನಗೊಂಡು ಇದೀಗ ಆಶಾದಾಯಕ ಬೆಳವಣಿಗೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಘವು ಈ ಬಾರಿ ಶೇ. ೩೫ ರಷ್ಟು ಹೆಚ್ಚುವರಿ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು. ರೂ.೪೧ ಕೋಟಿ ಸಾಲ ವಿತರಿಸಿ, ರೂ.೩೫ ಕೋಟಿ ಸಾಲ ವಸೂಲಿ ಮಾಡುವ ಮೂಲಕ ಶೇ. ೯೦ ರಷ್ಟು ಸಾಲ ವಸೂಲಿಯಾಗಿದೆ ಎಂದು ವಿವರಿಸಿದರು.
ತಾಲ್ಲೂಕಿನ ವಿವಿಧೆಡೆ ಒಟ್ಟು ೯ ಶಾಖೆಗಳನ್ನು ಹೊಂದಿರುವ ಸಂಘವು ಶೀಘ್ರವೇ ಪೆರ್ನೆಯಲ್ಲಿ ೧೦ನೇ ಶಾಖೆ ಆರಂಭಗೊಳ್ಳಲಿದೆ. ಇದೀಗ ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ಸಂಸ್ಥೆಯು ಇದೇ ವರ್ಷದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿ ಮತ್ತು ಮೂಡುಬಿದ್ರೆ ಆಲಂಗಾರು ಶಾಖೆ ತೆರೆಯುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ ಎಂದರು. ೨೦ನೇ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯು ಮಾವಿನಕಟ್ಟೆ ಮತ್ತು ಬೆಂಜನಪದವು ಶಾಖೆ ಸ್ವಂತ ಕಟ್ಟಡ ಹೊಂದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಸ್ವರಾಜ್, ಬಿ.ಗಜೇಂದ್ರ ಪ್ರಭು, ರಾಜೇಶ್ ಬಿ., ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕೆಲ್ ಡಿಕೋಸ್ತಾ, ಬಿ. ರವೀಂದ್ರ, ಹೇಮಂತ್ ಕುಮಾರ್ ಜೈನ್, ನಾರಾಯಣ ಸಿ. ಪೆರ್ನೆ, ಸಿಇಒ ಅಜಿತ್ ಕುಮಾರ್ ಇದ್ದರು.
